ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 40 ದಿನಗಳ ನಿರಂತರ ಮನೆಮನೆ ಭೇಟಿಯ ನಂತರ ಒಂದು ಟಿಪ್ಪಣಿ

ಬಂಧುಗಳೇ,

ಬರಲಿರುವ 2018 ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದರ ಕುರಿತಾಗಿ ಕಳೆದ 40 ದಿನಗಳಿಂದ (ನವೆಂಬರ್ 11, 2017 ರಂದು ಪ್ರಾರಂಭಿಸಿ) ಈ ಕ್ಷೇತ್ರದಲ್ಲಿ ನಿರಂತರವಾಗಿ ಮಾಡುತ್ತಿರುವ ಮನೆಮನೆ ಭೇಟಿ ಮತ್ತು ಜನಾಭಿಪ್ರಾಯ ಸಂಗ್ರಹಣೆ ಅಭಿಯಾನದ ಬಗ್ಗೆ ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ಕಳೆದ 40 ದಿನಗಳಲ್ಲಿ ಕ್ಷೇತ್ರದ 50% ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬೀದಿಬೀದಿ ಮತ್ತು ಮನೆಮನೆಗೆ ಭೇಟಿ ನೀಡಿ ಮತದಾರರೊಂದಿಗೆ ಮಾತನಾಡಲಾಗಿದೆ. ಸಂಕ್ರಾಂತಿಯ ಒಳಗೆ ಕ್ಷೇತ್ರದ ಬಹುತೇಕ ಪ್ರದೇಶವನ್ನು ಸುತ್ತಿ ಈ ಕಾರ್ಯ ಸಂಪೂರ್ಣ ಮಾಡಲು ಆಯೋಜಿಸಲಾಗಿದೆ.

ಚುನಾವಣಾ ರಾಜಕಾರಣಕ್ಕೆ ಸಂಬಂಧಿಸಿದಂತೆ ನನಗೆ ಕೆಲವು ಆದರ್ಶ-ತತ್ವ-ಸಿದ್ಧಾಂತಗಳಿವೆ. ಮತದಾರರಿಗೆ ಹಣ-ಹೆಂಡ-ಲಂಚದ ಆಮಿಷ ಒಡ್ಡಿ ಓಟು ಪಡೆಯಬಾರದು, ಸುಳ್ಳು ಆಶ್ವಾಸನೆಗಳನ್ನು ನೀಡಬಾರದು, ಚುನಾವಣಾ ಆಯೋಗ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚಿಗೆ ಖರ್ಚು ಮಾಡಬಾರದು; ಅಂದರೆ ಚುನಾವಣಾ ಅಕ್ರಮಗಳನ್ನು ಮಾಡಬಾರದು ಮತ್ತು ನೆಲದ ಕಾನೂನುಗಳನ್ನು ಮುರಿಯಬಾರದು. ಈ ತತ್ವಾದರ್ಶಗಳನ್ನು ಪಾಲಿಸುತ್ತಲೇ ನನ್ನ ಹಿಂದಿನ ಮೂರು ಚುನಾವಣೆಗಳನ್ನು ನಿಭಾಯಿಸಿದ್ದೇನೆ.

ಈ ಹಿನ್ನೆಲೆಯಲ್ಲಿ ನಮ್ಮಂತಹ ತತ್ವಾದರ್ಶಗಳಿರುವ ಮತ್ತು ಸೀಮಿತ ಸಂಪನ್ಮೂಲಗಳ ವ್ಯಕ್ತಿಗಳು ಎಲ್ಲೆಂದರಲ್ಲಿ ಸ್ಪರ್ಧಿಸಲಾಗುವುದಿಲ್ಲ. ಮತ್ತು ಸ್ಪರ್ಧಿಸಿ ಪ್ರತಿ ಸಲವೂ ಸೋಲುವುದರಲ್ಲಿ ಅಂತಹ ಅರ್ಥಗಳಿರುವುದಿಲ್ಲ. ನಾನು ಈ ಹಿಂದೆ ಸ್ಪರ್ಧಿಸಿದ್ದ ಪ್ರತಿ ಚುನಾವಣೆಗೂ ಒಂದು ಅರ್ಥ ಮತ್ತು ಉದ್ದೇಶ ಇತ್ತು. ಹಾಗಾಗಿ ಚುನಾವಣೆಯ ಸೋಲು ಸೋಲೆಂದು ನನಗೆಂದೂ ಅನ್ನಿಸಿಲ್ಲ.

ಆದರೆ ಈ ಸಲ ಹಾಗೆ ಇಲ್ಲ. ಗೆಲ್ಲಬೇಕೆಂದೇ ನಿಲ್ಲಬೇಕಿದೆ ಮತ್ತು ಅದೊಂದು ಮಾದರಿ/ಉದಾಹರಿಸುವ ಚುನಾವಣೆ ಆಗಬೇಕಿದೆ. ಅದಕ್ಕಾಗಿ ನಾನು ಕಂಡುಕೊಂಡಂತೆ ಜಯನಗರ ಕ್ಷೇತ್ರಕ್ಕಿಂತ ಉತ್ತಮವಾದ ಕ್ಷೇತ್ರ ನನಗೆ ಕಾಣಿಸುತ್ತಿಲ್ಲ. ಹತ್ತು ವರ್ಷಗಳ ಹಿಂದೆ ನಾನು ಸ್ಪರ್ಧಿಸಿದ್ದ ಮೊದಲ ಚುನಾವಣೆಯೂ ಇದೇ ಕ್ಷೇತ್ರದಿಂದಾಗಿತ್ತು.

ಈ ಕಳೆದ 40 ದಿನಗಳಲ್ಲಿ ಅಕ್ಷರಶಃ ಸಾವಿರಾರು ಜನರೊಂದಿಗೆ ಮಾತನಾಡಿದ್ದೇನೆ, ಕೈಕುಲುಕಿದ್ದೇನೆ, ಕೈಮುಗಿದಿದ್ದೇನೆ. ಬಹುತೇಕವಾಗಿ ಗೌರವಪೂರ್ವಕವಾಗಿ ಮತ್ತು ವಿನಯದಿಂದ ಸಂವಾದಿಸಿದ್ದೇವೆ. ಕೆಲವೇ ಕೆಲವು ಸಲ ತಕರಾರುಗಳೂ ಎದ್ದಿವೆ. ಕೆಲವರ ಪ್ರೀತಿ ಮತ್ತು ವಿಶ್ವಾಸವನ್ನು ಕಂಡು ನಿಜಕ್ಕೂ ದಂಗುಬಡಿದಿದ್ದೇನೆ. ಹಿಂದಿನ ಕೆಲಸ ಮತ್ತು ಸಾರ್ವಜನಿಕವಾಗಿ ಆಡುತ್ತಾ ಬಂದಿರುವ ಮಾತು ಹುಟ್ಟಿಸಿರುವ ವಿಶ್ವಾಸ ಮತ್ತು ನಂಬಿಕೆ ಅದು.

ಸವೆಯಬೇಕಾದ ಹಾದಿ ಇನ್ನೂ ಉದ್ದವಿದೆ. ನಲವತ್ತು ದಿನಗಳ ನಿರಂತರ ನಡಿಗೆ ಮತ್ತು ಮಾತು ಮುಂದಿನ ದಿನಗಳಿಗೂ ಸ್ಫೂರ್ತಿ ಮತ್ತು ಸ್ಥೈರ್ಯ ತುಂಬಿದೆ ಎಂದರೆ ನಮಗಾಗಿರಬಹುದಾದ ಸಕಾರಾತ್ಮಕ ಅನುಭವದ ಮಟ್ಟ ನಿಮಗರಿವಾಗಬಹುದು ಎಂದು ಭಾವಿಸುತ್ತೇನೆ.

ಒಟ್ಟಿನಲ್ಲಿ, ಒಳ್ಳೆಯ ದಿನಗಳು, ಆಶಾವಾದ ಹೆಚ್ಚಿಸುತ್ತಿರುವ ದಿನಗಳು.

ಈ ಅಭಿಯಾನಕ್ಕೆ ತಾವೂ ಕೈಜೋಡಿಸಬೇಕೆಂದು ಕೋರುತ್ತೇನೆ. ಇದರಲ್ಲಿ ಭಾಗಿಯಾಗಲು ತಮಗೆ ಆಸಕ್ತಿ ಇದ್ದಲ್ಲಿ ದಯವಿಟ್ಟು 7975625575 ಗೆ ಕರೆ ಮಾಡಿ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ

21-12-2017.

Both comments and pings are currently closed.

Comments are closed.

Powered by WordPress