2018 ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಣೆ

ಬಂಧುಗಳೇ,

ಈಗಾಗಲೇ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿ, ನನ್ನ ಇತಿಮಿತಿಗಳಲ್ಲಿ ಚುನಾವಣಾ ರಾಜಕೀಯ ಹೋರಾಟವನ್ನು ಮಾಡಿದ್ದ ನಾನು, ಈ ಬಾರಿ ಸ್ಪರ್ಧಿಸಿದರೆ ಗೆಲ್ಲಲೇಬೇಕು ಮತ್ತು ಆ ಮೂಲಕ ಒಂದು ಮಾದರಿ ನಿರ್ಮಿಸಿ, ರಾಜ್ಯದ ಸಾವಿರಾರು ಜನರಿಗೆ ಸ್ವಚ್ಚ ಮತ್ತು ಮೌಲ್ಯಾಧಾರಿತ ಚುನಾವಣಾ ರಾಜಕಾರಣದ ಬಗ್ಗೆ ಸ್ಫೂರ್ತಿ ಮೂಡಿಸಬೇಕು ಎನ್ನುವ ತೀರ್ಮಾನವನ್ನು ಮೊದಲೇ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ, ಹಣ-ಹೆಂಡ ಹಂಚದೆ, ಯಾವುದೇ ಚುನಾವಣಾ ಅಕ್ರಮ ಎಸಗದೆ, ಸುಳ್ಳು ಆಶ್ವಾಸನೆಗಳನ್ನು ನೀಡದೆ, ಆಮಿಷಗಳನ್ನು ಒಡ್ಡದೆ, ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ಪ್ರಚಾರ ಮಾಡಿ ಗೆಲ್ಲಲು ಸಾಧ್ಯವೇ ಎಂದು ಕಳೆದ ನಾಲ್ಕೂವರೆ ತಿಂಗಳಿನಿಂದ (11-11-2017 ರಿಂದ) ಕ್ಷೇತ್ರಾದ್ಯಂತ ಮನೆಮನೆ, ಬೀದಿಬೀದಿ ಸುತ್ತಿ ಜನಾಭಿಪ್ರಾಯ ಸಂಗ್ರಹಿಸುತ್ತ ಬಂದಿದ್ದೇವೆ. ಆ ಸಂದರ್ಭದಲ್ಲಿ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಪರಿಹಾರವೂ ಸಿಗುವಂತೆ ಮಾಡಿದ್ದೇವೆ.

ಈಗ ನನ್ನ ಮುಂದಿರುವ ಪ್ರಶ್ನೆ, ಇಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲ್ಲುವ ಅವಕಾಶ ಸಷ್ಟವಾಗಿ ಇದೆಯೇ? ಎನ್ನುವುದು.

ಕೆಲವು ಸಹಾಯ/ಬೆಂಬಲ ಸಿಕ್ಕರೆ ಖಂಡಿತ ಸಾಧ್ಯ ಎನ್ನುವ ವಿಶ್ವಾಸ ಈಗ ಬಂದಿದೆ.

ಎಂತಹ ಸಹಾಯಗಳು?
– ಕ್ಷೇತ್ರದವರಷ್ಟೇ ಅಲ್ಲ, ರಾಜ್ಯದ ವಿವಿಧ ಕಡೆಗಳಿಂದ ಕನಿಷ್ಟ ನೂರು ಜನರಾದರೂ ಸಮಾನಮನಸ್ಕರು ಬಂದು ಇಲ್ಲಿ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.
– ಚುನಾವಣಾ ಆಯೋಗ ನಿಗದಿಪಡಿಸಿರುವ ಚುನಾವಣಾ ವೆಚ್ಚದ ಮಿತಿ ರೂ.28 ಲಕ್ಷ. ಅಷ್ಟನ್ನೂ ನಾವು ಜನರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲು ಸಾಧ್ಯವಾಗಬೇಕು, ಮತ್ತು ಅಷ್ಟನ್ನೂ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಚಾರಕ್ಕೆ ಬಳಸಬೇಕು.

ಮೇಲಿನ ಎರಡೂ ಸಾಧ್ಯವಾಗುತ್ತದೆ, ಹಾಗೂ ಕಳೆದ ನಾಲ್ಕೈದು ತಿಂಗಳಿನಿಂದ ನಾವು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳಿಂದ ಜಯನಗರದ ಮತದಾರರಿಗೂ ನಮ್ಮ ಬಗ್ಗೆ ಒಳ್ಳೆಯ ವಿಶ್ವಾಸ ಮೂಡಿದೆ ಎಂದು ನಮಗೆ ಈಗ ಪ್ರತಿದಿನವೂ ಅರಿವಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ನಾನು ಈ ಬಾರಿ ನಿಮ್ಮೆಲ್ಲರ ಬೆಂಬಲ-ಸಹಾಯ-ಸಹಕಾರದಿಂದ ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಅಧಿಕೃತವಾಗಿ ಘೋಷಿಸುತ್ತಿದ್ದೇನೆ.

ಒಂದೆರಡು ದಿನಗಳಲ್ಲಿ ನಮ್ಮ ಅಭಿಯಾನ ಚುನಾವಣಾ ಪ್ರಚಾರವಾಗಿ ಬದಲಾಗಲಿದೆ ಮತ್ತು ಇನ್ನೂ ಹಲವು ರೂಪಗಳನ್ನು ಪಡೆಯಬೇಕಿದೆ.

ಹಾಗೆಯೇ ಮೂರ್ನಾಲ್ಕು ದಿನಗಳಲ್ಲಿ ಚುನಾವಣಾ ಸಂಬಂಧಿ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಹಂಚಿಕೊಳ್ಳಲಾಗುತ್ತದೆ.

ನಿಮ್ಮೆಲ್ಲರ ತನು-ಮನ-ಧನದ ಸಹಾಯದ ನಿರೀಕ್ಷೆಯಲ್ಲಿ…

ಬನ್ನಿ, ಸ್ವಚ್ಚ, ಸುಂದರ. ಸದೃಢ, ಸಮೃದ್ಧ. ಲಂಚಮುಕ್ತ, ಮಾದರಿ ಜಯನಗರ ನಿರ್ಮಿಸೋಣ. ನಾವೆಲ್ಲಾ ಸೇರಿ ಆ ಮೂಲಕ ಇತಿಹಾಸ ನಿರ್ಮಿಸೋಣ. ಜನಪರ, ಮೌಲ್ಯಾಧಾರಿತ ರಾಜಕಾರಣ ಕಟ್ಟೋಣ, ಪ್ರಜಾಪ್ರಭುತ್ವ ಬಲಪಡಿಸೋಣ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ

31-03-2018.

Both comments and pings are currently closed.

Comments are closed.

Powered by WordPress