ನಿಮ್ಮ ಕೈಲಾದುದನ್ನು, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲೂ ಜನ ನಿಮ್ಮ ಹಲ್ಲುದುರಿಸಬಹುದು.

“ಹೈ ನೂನ್” ಎಂಬ ಪ್ರಸಿದ್ಧ ಚಲನಚಿತ್ರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪಿಸುವ ಪೋಲಿಸ್ ಮುಖ್ಯಸ್ಥ ಕೇನ್ ಎನ್ನುವವನ ಪಾತ್ರದಲ್ಲಿ ಗ್ಯಾರಿ ಕೂಪರ್ ನಟಿಸಿದ್ದಾನೆ. ತನ್ನ ಪಟ್ಟಣಕ್ಕೆ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ಮೇಲೆ, ಮದುವೆಯಾಗಲು ತೀರ್ಮಾನಿಸುವ ಕೇನ್, ಮದುವೆಯ ನಂತರ ಪೋಲಿಸ್ ಕೆಲಸವನ್ನು ಬಿಟ್ಟು ಬೇರೆ ಊರಿಗೆ ಹೋಗಲು ತೀರ್ಮಾನಿಸುತ್ತಾನೆ. ಅಂದು ಆತನ ಮದುವೆಯ ದಿನ. ಮದುವೆಯ ಸಮಾರಂಭ ಆದ ಕೆಲವೆ ನಿಮಿಷಗಳಲ್ಲಿ ಕೇನ್‌ಗೆ ಒಂದು ಸುದ್ದಿ ಬರುತ್ತದೆ. ಆತ ಹಲವಾರು ವರ್ಷಗಳ ಹಿಂದೆ ಬಂಧಿಸಿ ಜೈಲಿಗೆ ತಳ್ಳಿದ್ದ ರೌಡಿಯೊಬ್ಬ ಈಗ ಜೈಲಿನಿಂದ ಬಿಡುಗಡೆಯಾಗಿದ್ದು, ಸೇಡು ತೀರಿಸಿಕೊಳ್ಳಲು ಆತ ಇನ್ನು ಕೇವಲ ಎರಡು ಗಂಟೆಗಳಲ್ಲಿ ನಗರಕ್ಕೆ ಬರಲಿದ್ದಾನೆ ಎನ್ನುವುದೇ ಆ ಸುದ್ದಿ. ಆ ಗೂಂಡಾನ ಮೂವರು ಚೇಲಾಗಳು ರೈಲು ಸ್ಟೇಷನ್‌ನಲ್ಲಿ ಆತ ಬಂದಿಳಿಯುವುದನ್ನೆ ಕಾಯುತ್ತಿರುತ್ತಾರೆ. ಆ ಗೂಂಡಾ ರೈಲಿನಿಂದ ಇಳಿದ ತಕ್ಷಣ ಆ ಮೂವರೂ ಅವನ ಜೊತೆ ಸೇರಿಕೊಂಡು ಕೇನ್‌ನನ್ನು ಕೊಲ್ಲಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬರಲಿದ್ದಾರೆ.

ಇದನ್ನು ಕೇಳಿದ ಕೇನ್, ಊರನ್ನು ಬಿಟ್ಟು ಓಡಿಹೋಗುವ ಬದಲಿಗೆ ಅವರನ್ನು ಎದುರಿಸಿ ಹೋರಾಡಲು ತೀರ್ಮಾನಿಸುತ್ತಾನೆ. ಕಳಚಿದ್ದ ತನ್ನ ಪೋಲಿಸ್ ಬ್ಯಾಡ್ಜ್ ಅನ್ನು ಮತ್ತೆ ಧರಿಸಿ, ಹೋರಾಟದಲ್ಲಿ ತನಗೆ ಹೆಗಲು ನೀಡುವಂತೆ ಪಟ್ಟಣದ ನಾಗರಿಕರನ್ನು ಕೇಳಿಕೊಳ್ಳುತ್ತಾನೆ. ಆದರೆ ಪಟ್ಟಣದ ನಾಗರಿಕರೆಲ್ಲ ನಿರಾಕರಿಸಿಬಿಡುತ್ತಾರೆ. ಕೊನೆಗೆ, ಆ ನಾಲ್ಕೂ ಜನರನ್ನು ಕೇನ್ ಏಕಾಂಗಿಯಾಗಿ ಎದುರಿಸುವಂತಾಗಿ ಬಿಡುತ್ತದೆ.

ಕೇನ್‌ನನ್ನು ಪಟ್ಟಣದ ಜನ ಗೌರವಿಸುತ್ತಿದ್ದರು. ತಮ್ಮೂರಿಗೆ ಶಾಂತಿಯನ್ನು ಮರಳಿಸಿದ, ಅದನ್ನು ಹಲವಾರು ವರ್ಷಗಳ ಕಾಲ ಕಾಪಾಡಿದ ಕೇನ್‌ನ ಬಗ್ಗೆ ಅವರಲ್ಲಿ ಬಹಳಷ್ಟು ಜನ ಕೃತಜ್ಞರೂ ಆಗಿದ್ದರು. ಆದರೆ ಈಗ, ಆತನಿಗೆ ಅವರ ಸಹಾಯ ತೀರ ಅಗತ್ಯವಾಗಿರುವ ಸಮಯದಲ್ಲಿ ಅವನನ್ನು ಒಂಟಿ ಮಾಡಿಬಿಡುತ್ತಾರೆ. ಆತ ಆ ಪಟ್ಟಣಕ್ಕೆ ತನ್ನ ಕೈಲಾದುದನ್ನೆಲ್ಲ ಮಾಡಿದ್ದ. ಈಗಲೂ ಆತ ಅಲ್ಲಿಯೇ ಉಳಿದ ಮತ್ತು ತಾನು ಮಾಡಲೇ ಬೇಕಾಗಿದ್ದ ಹೋರಾಟವನ್ನು ಮಾಡಿದ.

ನೀವು ನಿಮ್ಮ ಕೈಲಾದುದನ್ನೆಲ್ಲ, ನಿಮ್ಮ ಅತ್ಯುತ್ತಮ ಪರಿಶ್ರಮವನ್ನೆಲ್ಲ, ನಿಮ್ಮ ಒಳ್ಳೆಯತನವನ್ನೆಲ್ಲ ಧಾರೆಯೆರೆದಿದ್ದರೂ ಅದರಿಂದ ಏನು ಸಿಗಬಹುದು ಎಂದು ಹೇಳುವುದು ಕಷ್ಟ. ನೀವು ಮಾಡಿದ ಕೆಲಸವನ್ನು ಬಹುಶಃ ಜನ ಪ್ರಶಂಸಿಸಬಹುದು. ನಿಮಗೆ ಬೆಂಬಲ ಕೊಡಬಹುದು. ಆದರೆ, ನೀವು ಕೊಡುವ ನಿಮ್ಮೆಲ್ಲ ಒಳ್ಳೆಯತನ ಕೆಲವೊಮ್ಮೆ ಜನರಲ್ಲಿ ಹೊಟ್ಟೆಕಿಚ್ಚು ಮತ್ತು ವೈರವನ್ನು ಬೆಳೆಸಬಹುದು. ಇದನ್ನೆಲ್ಲ ನೀವು ಸ್ವಾರ್ಥದ ದುರುದ್ದೇಶ ಇಟ್ಟುಕೊಂಡು ಮಾಡುತ್ತಿದ್ದೀರಿ ಎಂದು ಕೆಲವರು ಅನ್ನಬಹುದು; ನಿಮಗೆ ನಿಜವಾದ ಶತ್ರುಗಳೂ, ಖೊಟ್ಟಿ ಸ್ನೇಹಿತರೂ ಹುಟ್ಟಬಹುದು; ಕೀಳು ಮನಸ್ಸಿನ ಜನ ನಿಮ್ಮನ್ನು ಹೊಡೆದುರುಳಿಸಲೂಬಹುದು; ನೀವು ವರ್ಷಗಟ್ಟಲೆ ಕಟ್ಟಿದ್ದು ನಿಮ್ಮ ಕಣ್ಣ ಮುಂದೆಯೆ ನಾಶವಾಗುವುದನ್ನು ಕಾಣಬೇಕಾಗಿ ಬರಬಹುದು; ನಿಮ್ಮಿಂದ ಸಹಾಯ ಪಡೆದ ಜನರೆ ನಿಮ್ಮ ಮೇಲೆ ಹಲ್ಲೆ ಮಾಡಬಹುದು; ಒಳ್ಳೆಯದಕ್ಕಾಗಿ ಮಾಡಬೇಕಾಗಿರುವ ಹೋರಾಟವನ್ನು ನೀವೊಬ್ಬರೆ ಏಕಾಂಗಿಯಾಗಿ ಮಾಡಬೇಕಾಗಿ ಬರಬಹುದು.

ನೀವು ನಿಮ್ಮದೆಲ್ಲವನ್ನೂ ಸಮಾಜಕ್ಕೆ ಕೊಟ್ಟಿದ್ದರೂ ಅದಕ್ಕೆ ನೀವು ತೆರಬೇಕಾದ ಬೆಲೆ ದುಬಾರಿ ಆಗಿರಬಹುದು. ಆದರೆ ಅದಕ್ಕಿಂತ ಹೆಚ್ಚಿನ ದುಬಾರಿ ಯಾವುದೆಂದರೆ, ನಿಮ್ಮಲ್ಲಿನ ಶ್ರೇಷ್ಠವಾದುದನ್ನೆಲ್ಲ, ನಿಮ್ಮ ಕೈಲಾದುದನ್ನೆಲ್ಲ ಮಾಡದೆ ಹೋಗಿ ಬಿಡುವುದು. ನೀವು ನಿಮ್ಮಿಂದ ಸಾಧ್ಯವಾದದ್ದನ್ನೆಲ್ಲ ನೀಡದೆ ಇದ್ದಲ್ಲಿ, ನೀವು ಏನು ಆಗಬೇಕಾಗಿದೆಯೊ ಅದು ನೀವಾಗಿಲ್ಲ.

ನೀವು ವಿಶಿಷ್ಟವಾದವರು, ಅನನ್ಯವಾದವರು ಎನ್ನುವುದನ್ನು ಎಂದೂ ಮರೆಯಬೇಡಿ. ನೀವು ವಂಶವಾಹಿನಿಗಳ ಸಹಿತವಾಗಿ ಜೈವಿಕವಾಗಿಯೂ ಅನನ್ಯರು. ನಿಮ್ಮ ಪ್ರತಿಭೆ ಮತ್ತು ಅನುಭವಗಳ ಸಂಯೋಗವೂ ವಿಶಿಷ್ಟವಾದದ್ದು. ಇದರ ಅರ್ಥ ಏನೆಂದರೆ, ವಿಶಿಷ್ಟವಾದ, ವಿಶೇಷವಾದ ಏನೋ ಒಂದನ್ನು ನೀವು ಈ ಜಗತ್ತಿಗೆ ಕೊಡಬಹುದಾಗಿದೆ ಎಂದು. ನಿಮ್ಮ ಕೈಯಲ್ಲಿ ಏನೆಲ್ಲ ಸಾಧ್ಯವೊ ಅದನ್ನೆಲ್ಲ ನೀಡಿದಾಗ ಮಾತ್ರ ನಿಮ್ಮ ಪಾಲಿನ ಕರ್ತವ್ಯವನ್ನು ನೀವು ಮಾಡಿದಂತಾಗುತ್ತದೆ.

ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ತನ್ನ ಕೈಲಾದುದನ್ನು, ತನ್ನೆಲ್ಲ ಒಳ್ಳೆಯದನ್ನು ಯಾವ ತರಹದ ಮನುಷ್ಯ ತಾನೆ ಕೊಡದೆ ಇರಬಲ್ಲ? ಯಾಕೆ ತಾನೆ ಯಾರಾದರೂ ಹಾಗೆ ಮಾಡಲು ಹಿಂಜರಿಯುತ್ತಾರೆ? ಯಾರು ತಾನೆ ಯಾಕಾದರೂ ಎರಡನೆ ದರ್ಜೆಯ ಕೆಲಸ ಮಾಡಲು ಬಯಸುತ್ತಾರೆ?

ಯಾವ ಸಮಯದಲ್ಲಿ ಏನನ್ನು ಮಾಡಬೇಕೆಂಬ ಸಮಯೋಚಿತ ಜಾಣ್ಮೆ ಮತ್ತು ತಂತ್ರ ಬಹಳ ಮುಖ್ಯವಾದದ್ದು ಎನ್ನುವುದೇನೊ ನಿಜ. ನಿಮ್ಮ ಅತ್ಯುತ್ತಮವಾದದ್ದನ್ನು ನೀಡಲು ಒಳ್ಳೆಯ ಅವಕಾಶಕ್ಕಾಗಿ ನೀವು ಎದುರು ನೋಡುತ್ತಿರಬಹುದು, ಅಥವ ಅಂತಹ ಸದವಕಾಶವನ್ನು ನೀವೆ ಸೃಷ್ಟಿಸಿಕೊಳ್ಳಲೂ ಬಹುದು. ಆದರೆ, ಭವಿಷ್ಯದಲ್ಲಿ ಇನ್ನೂ ಚೆನ್ನಾಗಿ ಕಾರ್ಯ ನಿರ್ವಹಿಸಲು ನೀವು ನಿಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿರುವಾಗ, ಈ ಕ್ಷಣದಲ್ಲಿ ಮಾಡಬೇಕಾದದ್ದು ಏನೋ ಒಂದು ಇರುತ್ತದೆ. ನಿಮ್ಮ ಅತ್ಯುತ್ತಮವಾದದ್ದನ್ನು ನೀಡುವುದೆಂದರೆ ಯಾವತ್ತೊ ಭವಿಷ್ಯದಲ್ಲಿ ನೀಡಬಹುದಾದದ್ದು ಅಲ್ಲ. ಬದಲಿಗೆ ಪ್ರತಿದಿನ ಮಾಡಬೇಕಿರುವುದು. ನೀವು ಈಗಾಗಲೆ ವಿಶಿಷ್ಟವಾದವರಾಗಿದ್ದೀರಿ. ಕೊಡಲು ಈಗಾಗಲೆ ನಿಮ್ಮ ಬಳಿ ಏನೋ ಒಂದು ವಿಶಿಷ್ಟವಾದದ್ದು ಇದೆ.

ನೀವು ನಿಮ್ಮೆಲ್ಲ ಶ್ರೇಷ್ಠತೆಯನ್ನು, ನಿಮ್ಮೆಲ್ಲ ಒಳ್ಳೆಯದನ್ನು ಕೊಡದೆ ಇದ್ದ ಪಕ್ಷದಲ್ಲಿ, ಯಾರಿಗಾಗಿ, ಇನ್ಯಾವ ಪ್ರಪಂಚಕ್ಕಾಗಿ ಅದನ್ನು ಉಳಿಸಿಕೊಂಡಿದ್ದೀರಾ?

ನಿಮಗೆ ಸಿಕ್ಕಿರುವ ಈಗಿನ ಜೀವನದಲ್ಲಿ ಏನೆಲ್ಲ ಸಾಧ್ಯವೊ ಅದನ್ನೆಲ್ಲ ಮಾಡುವುದೆ ನಿಮ್ಮ ಕೆಲಸ. ನೀವು ಮಾಡುವುದಕ್ಕೆ ಪ್ರತಿಯಾಗಿ ಪ್ರಪಂಚ ನಿಮಗೇನು ಮಾಡುತ್ತದೆ ಎನ್ನುವುದು ಇಲ್ಲಿ ಮುಖ್ಯವಲ್ಲ. ಮಿಕ್ಕದ್ದೆಲ್ಲ ಹೇಗೇ ಇರಲಿ, ನೀವು ಪ್ರಪಂಚಕ್ಕೆ ನಿಮ್ಮೆಲ್ಲ ಒಳ್ಳೆಯತನವನ್ನು ಹಾಗೂ ನಿಮ್ಮಿಂದ ಸಾಧ್ಯವಾದುದನ್ನು ಮಾಡುವುದರಿಂದ ನಿಮಗೆ ಈ ಜೀವನದ ಅರ್ಥ ಮತ್ತು ಆತ್ಮಾರ್ಥ ದೊರಕುತ್ತದೆ.

ನಿಮ್ಮ ಕೈಲಾದುದನ್ನು, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲೂ ಜನ ನಿಮ್ಮ ಹಲ್ಲುದುರಿಸಬಹುದು.
ಆದ್ರೂ, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.


ಈ ಅಧ್ಯಾಯದ ಆಡಿಯೊವನ್ನು ಇಲ್ಲಿ ಕೇಳಬಹುದು:

 

1 Comment

  1. lm nagaraju

    na DzÀ±ÀðªÉÇAzÀ£ÀÄß ªÀÄAiÉÄUÀÆr¹PÉÆAqÀÄ DzÀgÀ JzÀÄgÀÄ ±ÉæõÀתÁzÀzÀÝzÀÄ E¤ß®, è JAzÀÄ £ÀA©gÀĪÀ ªÀÄ£ÀĵÀå »UÉ §zÀÄPÀ§®è (ಟಿಚಿ ಆದರ್ಶವೊಂದನ್ನು ಮಯೆಗೂಡಿಸಿಕೊಂಡು ಆದರ ಎದುರು ಶ್ರೇಷ್ಠವಾದದ್ದದು ಇನ್ನಿಲ, ಎಂದು ನಂಬಿರುವ ಮನುಷ್ಯ ಹಿಗೆ ಬದುಕಬಲ್ಲ)

Leave a Reply