ಭೈರಪ್ಪ, ಫ್ರೊ. ರಾಮದಾಸ್, ಮತ್ತು ಒಬಾಮ.

This post was written by admin on November 3, 2008
Posted Under: Uncategorized

ಅಮೆರಿಕದಲ್ಲಿನ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಒಬಾಮ ಅಧ್ಯಕ್ಷನಾಗಿ ಚುನಾಯಿತನಾಗುವುದು ಈಗ a foregone conclusion. ಈ ಸಮಯದಲ್ಲಿ ಒಬಾಮ ಗೆಲ್ಲದಿದ್ದರೆ ಅದು ಅಮೆರಿಕದ ರಾಜಕೀಯ ಚರಿತ್ರೆಯಲ್ಲಿ ಒಂದು ಅತಿದೊಡ್ಡ upset ಆಗಲಿದೆ. ಅದು ಆಗುವ ಸಂಭವ ಕಮ್ಮಿ. ಹಾಗಾಗಿಯೇ, ಬಹಳಷ್ಟು ಪತ್ರಕರ್ತರು ಈಗಾಗಲೆ ಒಬಾಮ ಗೆದ್ದಿದ್ದಾನೆ ಎಂದೇ ಭಾವಿಸಿಬಿಟ್ಟಿದ್ದಾರೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಗೆಳೆಯ ಪ್ರೊ. ಪೃಥ್ವಿ ದತ್ತ ಚಂದ್ರ ಶೋಭಿ ಮತ್ತು ನಾನು ಓಕ್‌ಲ್ಯಾಂಡ್‌ನಲ್ಲಿ ಬರಾಕ್ ಒಬಾಮನ ಭಾಷಣ ಕೇಳಲು ಹೋಗಿದ್ದೆವು. ಅವನ ಮಾತು ಕೇಳಿಕೊಂಡು ಬಂದ ನಂತರ ನನಗಿದ್ದ ಒಂದು ಸಂಶಯ, “ಈ ದೇಶದ ಜನ ಒಬ್ಬ ಕಪ್ಪು ಮನುಷ್ಯನನ್ನು ಅಧ್ಯಕ್ಷನನ್ನಾಗಿ ಆರಿಸಲು ಸಿದ್ಧವಾಗಿದ್ದಾರೆಯೇ?” ಅಂತ. ಹಾಗಾಗಿಯೆ ನನಗೆ ಮೊದಲಿನಿಂದಲೂ ಒಬಾಮಾನ ಗೆಲ್ಲುವಿಕೆ ಬಗ್ಗೆ ಸ್ವಲ್ಪ ಸಂಶಯ ಇತ್ತು. ಏನೇ ಹೇಳಿ, ಸದ್ಯದ ಸವಾಲಿಗೆ ಸನ್ನದ್ಧವಾಗುವ ಈ ದೇಶದ ಜನರ ತಾಕತ್ತು ನಿಜಕ್ಕೂ ಬೆರಗು ಮೂಡಿಸುತ್ತದೆ. ಅಮೆರಿಕ ಯಾವ ಮಟ್ಟದಲ್ಲಿ Transform ಆಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಕೆಳಗಿನ ಲೇಖನ ಸಹಕಾರಿಯಾಗುತ್ತದೆ ಎಂದು ಭಾವಿಸುತ್ತೇನೆ.

ಹಾಗೆಯೆ, ನನ್ನ ಯುವಮಿತ್ರರು ಒಂದು ಆದರ್ಶದ ಕನಸನ್ನು ಧೈರ್ಯದಿಂದ ಕಾಣಲು, ತಮಗಿಷ್ಟವಾದ ಯುವಕ-ಯುವತಿಯನ್ನು ಭವಿಷ್ಯ ಮತ್ತು ಭೂತದ ಯಾವೊಂದು ಅಂಜಿಕೆ ಮತ್ತು ಭಯ ಇಲ್ಲದೆ ಉತ್ಕಟವಾಗಿ ಪ್ರೇಮಿಸಲು ಮತ್ತು ಮದುವೆಯಾಗಲು, ಜನಾಂಗೀಯ ದ್ವೇಷವನ್ನು ಪ್ರೇರೇಪಿಸುವ ಸಮಾಜದ್ರೋಹಿಗಳ ಚಿಂತನೆಗಳನ್ನು ಭಸ್ಮ ಮಾಡಲು, ಈ ಕೆಳಗಿನ ಲೇಖನ ಪ್ರೇರೇಪಿಸಲಿ ಎಂದು ಆಶಿಸುತ್ತೇನೆ. ಒಬಾಮಾನ ಯಶಸ್ಸು ಅಂತರ್ಜಾತಿ ವಿವಾಹಕ್ಕೆ ಸ್ಫೂರ್ತಿಯಾಗಲೆಂದೂ ಬಯಸುತ್ತೇನೆ.


ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು…
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜುಲೈ 6 , 2007 ರ ಸಂಚಿಕೆಯಲ್ಲಿನ ಲೇಖನ. ಫ್ರೊ. ರಾಮದಾಸರು ತೀರಿಕೊಂಡಾಗ ಬರೆದದ್ದು.)

ಅವರನ್ನು ಭೇಟಿಯಾಗಿ, ಎರಡು-ಮೂರು ತಾಸು ಮಾತನಾಡಿ ಮೂರು ತಿಂಗಳೂ ಆಗಿರಲಿಲ್ಲ. ಅವತ್ತಿನ ಮಾತುಕತೆಯಲ್ಲಿ ಕರ್ನಾಟಕದಲ್ಲಿ ಇಲ್ಲವಾಗುತ್ತಿರುವ ಸಾಂಸ್ಕೃತಿಕ ನಾಯಕತ್ವದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ಸಾಮಾಜಿಕ ಸಾಮರಸ್ಯದ ಬಗ್ಗೆ ಮಾತನಾಡಿದ್ದೆವು. ತೇಜಸ್ವಿ, ಅನಂತಮೂರ್ತಿಯವರೆಲ್ಲ ಅಂದಿನ ಮಾತಿನಲ್ಲಿ ಬಂದಿದ್ದರು. ಅದಾದ ಒಂದು ವಾರಕ್ಕೆಲ್ಲ ತೇಜಸ್ವಿಯವರು ತೀರಿ ಹೋದರು. ಅನಂತಮೂರ್ತಿಯವರು ಒಂದು ರೀತಿಯಲ್ಲಿ Liability ಆಗುತ್ತ ಹೋಗುತ್ತಿದ್ದಾರೆ. ಈಗ ರಾಮದಾಸರೂ ಇಲ್ಲ.

ಫ್ರೊ. ರಾಮದಾಸರ ಬಗ್ಗೆ ಬರೆಯುವುದಕ್ಕಿಂತ ಅವರು ಯಾವುದಕ್ಕೆ ಹೋರಾಡಿದರು, ಅವರ ಹೋರಾಟದ ಮುಂದುವರಿಕೆಗೆ ಇರುವ ಸವಾಲುಗಳು ಏನು ಎಂದು ಯೋಚಿಸುವುದೆ ಅವರಿಗೆ ಅರ್ಥಪೂರ್ಣ ನಮನ ಎನ್ನಿಸುತ್ತದೆ. ಕೆಲವೊಮ್ಮೆ ಎಲ್ಲವೂ ಕಾಕತಾಳೀಯ ಎನ್ನಿಸುತ್ತದೆ. ಅನೇಕ ಅಂತರ್ಜಾತಿ ವಿವಾಹಗಳನ್ನು ಮಾಡಿದ್ದ, ಆ ಪ್ರಾಮಾಣಿಕ, ಹಠವಾದಿ, ನಿಷ್ಠುರ, ಹಾಗು ನಾಡಿನ ನೈತಿಕ ಬಲವಾಗಿದ್ದ ರಾಮದಾಸರು ಮೈಸೂರಿನಲ್ಲಿ ಸತ್ತ ಸಮಯದಲ್ಲಿ ನಾನು ಇಲ್ಲಿ ನಮ್ಮ ಅಂತರ್ಜಾತಿ ವಿವಾಹದ ಅಮೇರಿಕ ರೂಪವಾದ ಕಪ್ಪು-ಬಿಳಿಯರ ಮಧ್ಯೆಯ ವಿವಾಹದ ಬಗ್ಗೆ ಬಂದಿರುವ ಅತ್ಯಪೂರ್ಣ ಸಿನೆಮಾ “Guess Who’s Coming to Dinner” ನೋಡುತ್ತ ಕುಳಿತಿದ್ದೆ.

ನಮ್ಮಲ್ಲಿ ಜಾತಿ ಎನ್ನುವುದು ನಮ್ಮ ಬೇರುಗಳನ್ನು ಹುಡುಕಿಕೊಳ್ಳುವ, ನೀತಿಮೌಲ್ಯಗಳ ಆದರ್ಶ ವ್ಯವಸ್ಥೆ ಎಂದಿದ್ದರೆ ಜಾತಿವಾದವನ್ನು ಇರಲಿ ಎನ್ನಬಹುದಿತ್ತು. ಆದರೆ ಈ ಜಾತಿ ವ್ಯವಸ್ಥೆ ಒಬ್ಬ ಮನುಷ್ಯನಿಂದ “ನಾನು ಮೇಲು, ನೀನು ಕೀಳು” ಎಂದು ಅಹಂಕಾರದಿಂದ ಹೇಳಿಸಿದರೆ, ಮತ್ತೊಬ್ಬನಿಂದ “ಅಯ್ಯ, ತಾವು ಮೇಲು, ನಾನು ಕೀಳು” ಎಂದು ದೈನ್ಯದಿಂದ ಹೇಳುವಂತೆ ಮಾಡುತ್ತದೆ. ಭಾರತ ಆಂತರಿಕವಾಗಿ ಗಟ್ಟಿಯಾಗಬೇಕಾದರೆ, ಸಮಗ್ರವಾಗಿ ಮುಂದುವರಿಯಬೇಕಾದರೆ ಹುಟ್ಟಿನಿಂದ ಬರುವ ಜಾತಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವುದು ಅತ್ಯವಶ್ಯ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣನಿಂದಲೂ, ಕಳೆದ ಶತಮಾನದಲ್ಲಿ ಗಾಂಧಿಯಿಂದಲೂ ಅಂತರ್ಜಾತಿ ವಿವಾಹಕ್ಕೆ ಬಹಿರಂಗ ಬೆಂಬಲ ಸಿಗುತ್ತ ಬಂದಿದೆ. ಜಾತಿ ವಿನಾಶದತ್ತ ಒಂದು ಪ್ರಾಯೋಗಿಕ ಹೆಜ್ಜೆ ಈ ಅಂತರ್ಜಾತಿ ವಿವಾಹ. ಅದಕ್ಕೆ ಜಿಡ್ಡುಗಟ್ಟಿದ, ಕಂದಾಚಾರದ, ಸಣ್ಣ ಮನುಷ್ಯರಿಂದ ನಮ್ಮಲ್ಲಿ ವಿರೋಧವಿತ್ತೆ ವಿನಹ ಕಾನೂನಿನ ವಿರೋಧ ಎಂದೂ ಇರಲಿಲ್ಲ.

ಅಮೇರಿಕದಲ್ಲಿನ ವರ್ಣಭೇದ ನಮ್ಮ ಜಾತಿವ್ಯವಸ್ಥೆಯ ಪ್ರತಿರೂಪ. ಇಲ್ಲಿ 1967 ರ ತನಕ ಅನೇಕ ರಾಜ್ಯಗಳಲ್ಲಿ ಅಂತರ್ವರ್ಣೀಯ ವಿವಾಹ ಕಾನೂನಿಗೆ ವಿರುದ್ಧವಾಗಿತ್ತು. ಅದೆ ವರ್ಷ ಬಂದ ಸಿನೆಮಾ “Guess Who’s Coming to Dinner”. ಹಾಲಿವುಡ್‌ನ ನಂಬರ್ 1 ಶ್ರೇಷ್ಠ ನಟಿ ಕ್ಯಾಥರಿನ್ ಹೆಪ್‌ಬರ್ನ್, ಮತ್ತೊಬ್ಬ ಶ್ರೇಷ್ಠ ನಟ ಹಾಗೂ ನಿಜಜೀವನದಲ್ಲೂ ಆಕೆಯ ಸಂಗಾತಿಯಾಗಿದ್ದ ಸ್ಪೆನ್ಸರ್ ಟ್ರೇಸಿ, ಉತ್ತಮ ನಟನೆಗೆ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ನಟ ಸಿಡ್ನಿ ಪಾಯಿಟೀರ್ ನಟಿಸಿರುವ ಚಿತ್ರ ಇದು. ಇದರಲ್ಲಿ ಕರಿಯ ಯುವಕ ಮತ್ತು ಬಿಳಿ ಯುವತಿ ಪರಸ್ಪರರನ್ನು ಪ್ರೇಮಿಸಿ, ವಿವಾಹವಾಗ ಬಯಸುತ್ತಾರೆ. ಬಿಳಿ ಹುಡುಗಿಯ ಅಪ್ಪಅಮ್ಮ ಉದಾರವಾದಿಗಳು; ತಮ್ಮ ಜೀವನ ಪರ್ಯಂತ ಪ್ರಗತಿಪರ ಮೌಲ್ಯಗಳಿಗೆ ಬದ್ದರಾಗಿದ್ದವರು. ತಾವು ಹೇಳುತ್ತಿದ್ದ ಥಿಯರಿ ತಮ್ಮ ಮನೆಯಲ್ಲಿಯೇ ಪ್ರಾಯೋಗಿಕವಾಗಿ ಆಚರಿಸಬೇಕಾಗಿ ಬಂದಾಗ ಅವರೇನು ಮಾಡುತ್ತಾರೆ ಎನ್ನುವುದು ಚಿತ್ರದ ಕಥೆ.

ಚಿತ್ರದ ಕೊನೆಗೆ ಎಲ್ಲಾ ವಿರೋಧಗಳ ನಡುವೆ ಈ ಅಂತರ್ವರ್ಣೀಯ ಮದುವೆಗೆ ಒಪ್ಪಿಗೆ ಕೊಡುತ್ತ ಹುಡುಗಿಯ ಅಪ್ಪ ಸಂಬಂಧಪಟ್ಟವರನ್ನೆಲ್ಲ ಕೂರಿಸಿಕೊಂಡು, ಯುವಪ್ರೇಮಿಗಳಿಗೆ ಹೀಗೆ ಹೇಳುತ್ತಾನೆ:

“ಮದುವೆ ಆದ ಮೇಲೆ ನೀವು ಎದುರಿಸಲಿರುವ ಸಮಸ್ಯೆಗಳು ಕಲ್ಪನೆಗೂ ಮೀರಿದ್ದು. ಆದರೆ ನಿಮಗೆ ಎಂತೆಂತಹ ವಿರೋಧಗಳು ಬರಲಿವೆ ಎಂಬ ಅರಿವು ನಿಮಗಿದೆ ಎಂದು ನನಗೆ ಗೊತ್ತು. ಈ ಮದುವೆಯಿಂದ ಶಾಕ್ ಆಗುವ, ಕೋಪಗೊಳ್ಳುವ, ಗಾಬರಿಯಾಗುವ ಹತ್ತು ಕೋಟಿ ಜನ ಈ ದೇಶದಲ್ಲಿಯೆ ಇದ್ದಾರೆ. ನೀವು ನಿಮ್ಮ ಜೀವನದ ಕೊನೆಯತನಕವೂ ಪ್ರತಿದಿನವೂ ಇಂತಹ ವಿರೋಧವನ್ನು ಲೆಕ್ಕಿಸದೆ ಮುಂದಕ್ಕೆ ಸಾಗಬೇಕಷ್ಟೆ. ಈ ಜನರನ್ನು ನೀವು ನಿರ್ಲಕ್ಷಿಸಲು ಪ್ರಯತ್ನಿಸಬಹುದು ಇಲ್ಲವೆ ಅವರಿಗಾಗಿ ಹಾಗೂ ಅವರ ಪೂರ್ವಾಗ್ರಹಗಳಿಗಾಗಿ, ಅವರ ಮತಾಂಧತೆಗಾಗಿ, ಅವರ ಅಂಧ ದ್ವೇಷಕ್ಕಾಗಿ, ಅವರ ಮುಠ್ಠಾಳ ಭೀತಿಗಳಿಗಾಗಿ ನೀವು ವಿಷಾದ ತೋರಿಸಬಹುದು. ಈ ಮದುವೆಯ ವಿರುದ್ಧ ಯಾರು ಬೇಕಾದರೂ ಒಳ್ಳೆಯ ವಾದ ಮಂಡಿಸಬಹುದು, ಅದರಲ್ಲೂ ನಿರಾಕರಿಸಲು ಆಗದಂತಹ, ತಲೆಯ ಮೇಲೆ ಹೊಡೆದಂತಹ ವಾದ ಮಂಡಿಸಬಹುದು. ಯಾವನೋ ಒಬ್ಬ ಹಾದರಕ್ಕುಟ್ಟಿದವನು ನೀವು ಮದುವೆ ಮಾಡಿಕೊಳ್ಳುವುದು ಒಳ್ಳೆಯದಲ್ಲ ಎಂದು ವಾದ ಮಂಡಿಸಿದರೂ, ಒಳ್ಳೆಯವರಾದ, ಕಲ್ಮಶಗಳಿಲ್ಲದ, ಗಾಢವಾಗಿ ಪ್ಪರಸ್ಪರರನ್ನು ಪ್ರೀತಿಸುವ ನೀವು ಮದುವೆ ಆಗದಿರುವುದೇ ಅದೆಲ್ಲಕ್ಕಿಂತ ಕೆಟ್ಟದ್ದು. (No matter what kind of a case some bastard could make against your getting married, there would be only one thing worse, and that would be if – knowing what you two are and knowing what you two have and knowing what you two feel- you didn’t get married.)”

ಇತ್ತೀಚೆಗೆ ಕನ್ನಡದ ಒಂದು ಇಂಟರ್ನೆಟ್ ಫೋರಮ್‌ನಲ್ಲಿ, ಅಂತರ್ಜಾತಿ ವಿವಾಹ ಮಾಡಿಕೊಳ್ಳಬಾರದು, ಅದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ, ಒಂದೊಂದು ಜಾತಿಯ ಆಚಾರ ವಿಚಾರಗಳು ಒಂದೊಂದು ತರಹ, ಯಾಕೆ ಬೇಕು ಅವೆಲ್ಲ, ಎನ್ನುವಂತಹುದನ್ನು ಒಂದು ಗುಂಪು ಸಾಧಿಸುತ್ತಿತ್ತು. ನನಗೆ ಅದಕ್ಕಿಂತ ಶಾಕ್ ಆಗಿದ್ದು ಯಾರೊ ಒಬ್ಬರು ಪುಣ್ಯಾತ್ಮರು ಅಂತರ್ಜಾತಿ ವಿವಾಹಗಳು ಯಶಸ್ವಿಯಾಗುವುದಿಲ್ಲ, ಯಾಕೆಂದರೆ ಅದರಲ್ಲಿ ಅನೇಕ ಸಮಸ್ಯೆಗಳಿವೆ, ಬೇಕಾದರೆ ಭೈರಪ್ಪನವರ “ದಾಟು” ಕಾದಂಬರಿ ಓದಿ ಎಂದಾಗ! ಈಗ ತಾನೆ ಮತ್ತೊಬ್ಬ ಭೈರಪ್ಪ ಭಕ್ತನ ಬ್ಲಾಗ್ ಒಂದರಲ್ಲಿ ನೋಡುತ್ತೇನೆ, “ಒಬ್ಬ ಬ್ರಾಹ್ಮಣ ಮತ್ತು ದಲಿತ ಹೆಣ್ಣುಮಕ್ಕಳಿಬ್ಬರ ಸ್ನೇಹ ಮುಂದುವರೆಯಲಿಲ್ಲ, ಏಕೆಂದರೆ ನಮ್ಮ ಆಚಾರ, ವಿಚಾರ, ಸಂಸ್ಕಾರಗಳೆ ಬೇರೆ,” ಎಂಬ ಕತೆ! ಇದೆಲ್ಲ ಯಾರಿಂದ ಪ್ರೇರಿತವಾಗಿ ಬರುತ್ತಿದೆ ಎನ್ನುವುದಕ್ಕೆ ಭೂತಗನ್ನಡಿ ಬೇಕಿಲ್ಲ.

ಭೈರಪ್ಪನವರೇನೊ ಸಾಹಿತ್ಯದಿಂದ ಸಮಾಜ ಬದಲಾವಣೆ ಅಸಾಧ್ಯ ಎನ್ನುತ್ತಾರೆ. ಇದಕ್ಕಿಂತ ಬೇಜವಾಬ್ದಾರಿ ಮಾತನ್ನು ನಾನೆಲ್ಲೂ ಕೇಳಿಲ್ಲ. ಅಪ್ಪಟ ಜಾತಿವಾದಿಯಾದ ಭೈರಪ್ಪನವರಂತಹ ಚಾಣಾಕ್ಷರು ಮಾತ್ರ ಹಾಗೆ ಹೇಳಿ ದಾಟು, ಆವರಣದಂತಹ ಕಾದಂಬರಿ ರಚಿಸಿ, ಮುಗ್ಧ ಜನರಲ್ಲಿ ಕಂದಾಚಾರವೆ ಒಂದು ಉತ್ತಮ ಸಿದ್ದಾಂತ, ಜೀವನಪಥ ಎಂದೆಲ್ಲ ಹೇಳಿ, ಸಮಾಜದ ದಾರಿತಪ್ಪಿಸಿಯೂ ಬಚಾವಾಗಿ ಬಿಡುತ್ತಾರೆ. ಹಿಂದೂ ಸಮಾಜ ಸುಧಾರಣೆ ಆಗುವುದು ಸಮಾಜದ ಎಲ್ಲಾ ಸ್ತರದಲ್ಲಿ ಹೊಕ್ಕುಬಳಕೆ ಜಾಸ್ತಿಯಾದಾಗಲೆ ಹೊರತು ತಮ್ಮ ಜಾತಿ ದೊಡ್ಡದು ಎಂದು ಪರೋಕ್ಷವಾಗಿ ಸಾಧಿಸುವ, ತಮ್ಮ ಜಾತಿ ಸಂಘದಲ್ಲಿ ಪ್ರತ್ಯಕ್ಷವಾಗಿ ಕುಟುಂಬ ಪರಿವಾರ ಸಮೇತ ಭಾಗಿಯಾಗುವ ಭೈರಪ್ಪನಂತಹವರಿಂದ ಅಲ್ಲ. ಹೆತ್ತವರಿಗೆ ಬೇಸರವಾಗುತ್ತದೇನೋ ಎನ್ನುವ ಭಯ, ನೆಂಟರ ವಿರೋಧ, ಸ್ವಜಾತಿಯವರ ಧಾಂಧಲೆ, ಹೀಗೆ ಅನೇಕ ಕಾರಣಗಳು ಅಂತರ್ಜಾತಿ ವಿವಾಹಕ್ಕೆ ಅನುಕೂಲವಾಗಿಲ್ಲ. ಅವೆಲ್ಲವನ್ನೂ ಮೀರಿ ಭೈರಪ್ಪನಂತವರು ಹೇಳುವ, “ಅಯ್ಯೋ, ಜಾತಿಯನ್ನು ದಾಟಬೇಡ್ರಿ, ಅದರಿಂದ ಸಮಸ್ಯೆಗಳು ಬರುತ್ತವೆ ಕಣ್ರಿ,” ಎಂಬ ಪ್ರೀತಿಯ ಅಂಶವೇ ಇಲ್ಲದ ಪಲಾಯನವಾದ ದೊಡ್ಡದಾಗಿ ಬಿಡಬಾರದು ಇಲ್ಲಿ.

40 ವರ್ಷಗಳ ಹಿಂದಿನ ಆ ಮೇಲಿನ ಸಿನೆಮಾದಲ್ಲಿ ತಮಾಷೆಯಾಗಿ ಒಂದು ಮಾತು ಬರುತ್ತದೆ. “ನಮಗೆ ಹುಟ್ಟುವ ಮಗು ಅಮೇರಿಕದ ಪ್ರೆಸಿಡೆಂಟ್ ಆಗಲಿ ಎಂದು ಬಯಸುತ್ತೇವಾದರೂ, ವಿದೇಶಾಂಗ ಸಚಿವನಾದರೂ ಪರವಾಗಿಲ್ಲ,” ಎನ್ನುವ ಆಗಿನ ಕಾಲಕ್ಕೆ ಅವಾಸ್ತವ ಎನ್ನಿಸುವ ಮಾತನ್ನು ಹೇಳುತ್ತಾನೆ ಆ ಕರಿಯ ಪ್ರೇಮಿ. ಇವತ್ತು ನೋಡಿ, ಕಳೆದ ಆರು ವರ್ಷಗಳಿಂದ ಅಮೇರಿಕದ ವಿದೇಶಾಂಗ ಸಚಿವರಿಬ್ಬರೂ ಕರಿಯರೆ. ಈಗಿನವರಂತೂ ಕಪ್ಪುಮಹಿಳೆ. ಕರಿಯಗಂಡು, ಬಿಳಿಹೆಣ್ಣಿನ ಮಗನಾದ ಬರಾಕ್ ಹುಸೇನ್ ಒಬಾಮ ಎಂಬ ಸೆನೆಟರ್ ಮುಂದಿನ ಏಳೆಂಟು ವರ್ಷ ಅಂತಹ ದೊಡ್ಡ ತಪ್ಪುಗಳನ್ನು ಮಾಡದಿದ್ದರೆ ಈ ದೇಶದ ಅಧ್ಯಕ್ಷನೂ ಆಗಬಹುದು!

ಸುಂದರ ಭವಿಷ್ಯದ ಕನಸು ಕಂಡ ದಾರ್ಶನಿಕ ಫ್ರೊ. ರಾಮದಾಸರು ಬಿತ್ತಿದ ಬೀಜಗಳು, ನೆಟ್ಟ ಗಿಡಗಳು ಭೈರಪ್ಪನವರು ಬಿತ್ತಿರುವ ಕುಲಾಂತಕ ಪಾರ್ಥೇನಿಯಮ್ ಕಳೆಯ ಮಧ್ಯೆ ಈಗ ಸಬಲವಾಗಿ ಬೆಳೆಯಬೇಕಿದೆ.

Reader Comments

ರವಿ, ನೀವು ಚುನಾವಣೆಗೆ ನಿಂತಿದ್ದವರು. ಮುಂದೆಯೂ ಬಹುಷಃ ನಿಲ್ಲುತ್ತೀರಿ. ಭೈರಪ್ಪನವರ ವಿರುಧ್ಧ, ಅನಂತಮೂರ್ತಿಯವರ ಪರ ಬರೆಯುವುದು ಸಹಜ. ನಿರೀಕ್ಷಿಸಬಹುದಾದದ್ದು. ಇದು ನಿಮ್ಮನ್ನು ನಾಯಕರನ್ನಾಗಿ ಮಾಡುವುದರಲ್ಲಿ ಎಷ್ಟು ಮುಂದಕ್ಕೆ ಕರೆದೊಯ್ಯಬಹುದು. ಮುಂದೆ ನೀವು ಕಾಂಗ್ರೆಸ್ ಸೇರಬಹುದು. ಒಳ್ಳೇ ಬೆಲೆ ಬರಬಹುದು. ನಿಮ್ಮ ಪ್ರಯತ್ನ ಮುಂದುವರೆಯಲಿ. ಫಲಕಾರಿಯಾಗಲೆಂದು ಆಶಿಸುವೆ.

#1 
Written By Anonymous on November 5th, 2008 @ 2:03 am

Hello Ravi,
i don’t know intercast marrige is good or bad.But i want to tell these things a boy and girl can love and marry.But after the marriage if the boy family does not like the girl then tehy will create nonsense situation on her so eventually the married couple gets the pain and finally one day they loss the trust and get divorce even in wrose case girl can commit sucide. No parents want this so the pepole avoids that. As in intercast love marrige both the family have not agreed and they don’t have proper communication.See you better marry a inter cast girl and then experience it.You guys are suck. you people will not have proper balance in relation ships and writes all these nonsense.

#2 
Written By From on December 2nd, 2010 @ 4:28 am

Add a Comment

required, use real name
required, will not be published
optional, your blog address