ನಿಮ್ಮಗಳ ನಿಷ್ಠೆಯೂ ಭಾರತಕ್ಕಿಲ್ಲ

This post was written by admin on December 30, 2008
Posted Under: Uncategorized

(ಗುಜರಾತಿನ ಧೇಡ್ ಜಾತಿಗೆ ಸೇರಿದ) ದಲಿತ ಕುಟುಂಬವೊಂದು ಮೊದಲ ಬಾರಿಗೆ ಸತ್ಯಾಗ್ರಹ ಆಶ್ರಮದಲ್ಲಿ ಇರಲು ಬಂದಾಗ ಅದನ್ನು ಕಸ್ತೂರಬಾ ಸಹ ಒಪ್ಪಿಕೊಂಡಿರಲಿಲ್ಲ. ಆಫ್ರಿಕಾದಲ್ಲಿದ್ದಾಗ ಇಂತಹುದಕ್ಕೆ ಅಷ್ಟೇನೂ ವಿರೋಧ ತೋರಿಸದಿದ್ದ ಕಸ್ತೂರಬಾಗೆ ಇಲ್ಲಿ ಸರೀಕರ ಮುಂದೆ ದಲಿತರನ್ನು ಮುಟ್ಟಿಕೊಳ್ಳುವುದು ಅಥವ ಅವರನ್ನು ಪಕ್ಕದಲ್ಲಿಟ್ಟುಕೊಳ್ಳುವುದು ಬಹಳ ಕಷ್ಟವಾಗಿರಬೇಕು. ಆದರೆ ಯಾವಾಗ ಗಾಂಧಿ ‘ನಿನಗೆ ಅದು ಅಸಾಧ್ಯವಾದರೆ ನನ್ನನ್ನು ಬಿಟ್ಟು ಹೋಗಬಹುದು. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿ ಬೇರೆಯಾಗೋಣ,’ ಎಂದರೊ ಕಸ್ತೂರಬಾ ಅದಕ್ಕೆ ಮಣಿದರು. ಆದರೆ, ಅವರಿಗೆ ತುಂಬ ಹತ್ತಿರವಾಗಿದ್ದ ಮಗನ್‍ಲಾಲ್ (ಗಾಂಧಿಯ ದೊಡ್ಡಪ್ಪನ ಮೊಮ್ಮಗ) ಮತ್ತು ಆತನ ಹೆಂಡತಿ ಗಾಂಧಿಯನ್ನು ತೊರೆದು ಆಶ್ರಮದಿಂದ ಹೊರಟೇಬಿಟ್ಟರು. (ಮತ್ತೆ ಅವರು ಮನಸ್ಸು ಶುದ್ಧೀಕರಿಸಿಕೊಂಡು ವಾಪಸಾಗುತ್ತಾರೆ!)

ಹೀಗೆ ಅಸ್ಪೃಶ್ಯತೆ ಮತ್ತು ಜಾತಿಶ್ರೇಷ್ಠತೆ ಅಸಾಮಾನ್ಯವಾಗಿದ್ದ ಆ ಸಮಯದಲ್ಲಿ ಬ್ರಿಟಿಷರಿಂದ ಸ್ವರಾಜ್ಯವನ್ನು ಕೇಳುತ್ತಿದ್ದ ಹಿಂದುಗಳಲ್ಲಿ ಹೆಚ್ಚಿನ ಪಾಲು ಫ್ಯೂಡಲ್ ಮನೋಭಾವದ ಮೇಲ್ಜಾತಿಯವರೆ ಆಗಿದ್ದರು. ಇದನ್ನೆಲ್ಲ ಗಮನಿಸಿಯೆ ಗಾಂಧಿ ಅನೇಕ ಸಲ ‘ಅಸ್ಪೃಶ್ಯತೆಯನ್ನು ಪಾಲಿಸುವವರು ಸ್ವರಾಜ್ಯವನ್ನು ಕೇಳಲು ಅರ್ಹರಲ್ಲ.’ ಎಂದು ಹೇಳುತ್ತಿದ್ದರು. ‘ಮೊದಲಿಗೆ ಸಾಧಿಸಿಬೊಡೋಣ, ಮಿಕ್ಕದ್ದನ್ನು ಆಮೇಲೆ ನೋಡಿಕೊಳ್ಳೋಣ,’ ಎನ್ನುವ ಸಾಮಾನ್ಯ ಜನರ ಮತ್ತು ಸಾಮಾನ್ಯ ನಾಯಕರ ಮನೋಭಾವಕ್ಕೆ ಇದನ್ನು ಹೋಲಿಸಿದರೆ, ಗಾಂಧಿ ಕೇವಲ ಅಸ್ಪೃಶ್ಯತೆಯ ವಿಚಾರಕ್ಕೆ ಸ್ವರಾಜ್ಯವನ್ನೂ ಪಣಕ್ಕೆ ಒಡ್ಡಿದ್ದರು ಎನ್ನಿಸುತ್ತದೆ. ಈಗಲೂ ಕೆಲವರಿಗೆ ಹಾಗೆಯೆ ಅನ್ನಿಸುತ್ತದೆ. ಆದರೆ ಅದು ಗಾಂಧಿಯ ನೈತಿಕತೆಯ ಮಟ್ಟ. ಜೊತೆಗೆ ಹಿಂದೂ ಸಮಾಜವನ್ನೂ ಮಾನಸಿಕವಾಗಿ ಶುಚಿ ಮಾಡುವ ಕ್ರಿಯೆಯ ಭಾಗ. ಗಾಂಧಿ ಪದೆಪದೆ ಪ್ರತಿಪಾದಿಸುತ್ತಿದ್ದದ್ದು ಸ್ವರಾಜ್ಯಕ್ಕೆ ಭಾರತೀಯರು ಮೊದಲು ಅರ್ಹರಾಗಬೇಕು. ಗಾಂಧಿಯ ಗಮನ ಇದ್ದದ್ದು ಸ್ವರಾಜ್ಯ ಪಡೆದುಕೊಂಡ ಮೇಲೆ ನಾವು ಅದನ್ನು ಹೇಗೆ ನಿಭಾಯಿಸುತ್ತೇವೆ ಮತ್ತು ಉಳಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ. ಭಾರತ ದಾಸ್ಯಕ್ಕೆ ಯಾಕೆ ಒಳಗಾಯಿತು ಎನ್ನುವುದಕ್ಕೆ ಟಾಲ್ಸ್‌ಟಾಯ್ ಹೇಳಿದ್ದ ಮಾತೂ ಬಹುಶಃ ಇದಕ್ಕೆ ಪೂರಕವಾಗಿತ್ತು. (ಗಾಂಧಿ ಮತ್ತು ಟಾಲ್ಸ್‌ಟಾಯ್ ನಡುವಿನ ಪತ್ರವ್ಯವಹಾರ ಮತ್ತು ಗಾಂಧಿಯ ಮೇಲೆ ಟಾಲ್ಸ್‌ಟಾಯ್‍ ಪ್ರಭಾವವನ್ನು ಇನ್ನೊಂದರಲ್ಲಿ ಬರೆಯುತ್ತೇನೆ.)

ಇದನ್ನೆಲ್ಲ ಓದುತ್ತಿರುವಾಗ ನನಗೆ ಇವತ್ತಿನ ಭಾರತ ಮತ್ತು ಅದರ ಈಗಿನ ಸವಾಲುಗಳ ಬಗ್ಗೆ ಯೋಚನೆ ಮಾಡುವುದರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಗಾಂಧಿಯ ಕಾಲದಲ್ಲಿ ಅಸ್ಪೃಶ್ಯತೆ ಮತ್ತು ಜಾತಿವಾದದ ಪರ ಇದ್ದ ಮನೋಭಾವದ ಜನರ ಇಂದಿನ ಪೀಳಿಗೆಯ ಸಂತಾನ ಜಾತೀಯತೆಯನ್ನು ಬೇರೊಂದು ತರದಲ್ಲಿ ಮುಂದುವರೆಸುತ್ತಿದ್ದಾರೆ. ಅದೇ ರೀತಿ ನಿಜವಾದ ಭಾರತೀಯರು ಇಲ್ಲಿಯ ಹಿಂದೂಗಳು ಮಾತ್ರವೆ ಎನ್ನುವುದನ್ನೂ ಘೋಷಿಸುತ್ತಿದ್ದಾರೆ. ಅವರಿಗೆ ಗಾಂಧಿ ಆಗ ಪ್ರತಿಪಾದಿಸಿದ ಅರ್ಹತೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಇವತ್ತಿನ ನೈಜ ಜಾತ್ಯತೀತ ಭಾರತೀಯ ಒಂದನ್ನು ಹೇಳಬೇಕಿದೆ; ಒಂದು ಸಮುದಾಯ ಅಥವ ಕೋಮಿನ ಜನರನ್ನು ನಿಜವಾದ ದೇಶವಾಸಿಗಳಲ್ಲ, ಅವರ ನಿಷ್ಠೆ ಭಾರತಕ್ಕಿಲ್ಲ ಎನ್ನುವ ನಿಮ್ಮಗಳ ನಿಷ್ಠೆಯೂ ಭಾರತಕ್ಕಿಲ್ಲ. ಭಾರತದಲ್ಲಿ ಹುಟ್ಟಿರುವವರನ್ನೆ ಒಂದು ಕೃತ್ರಿಮ ಸಿದ್ಧಾಂತದ ಆಧಾರದ ಮೇಲೆ ಭಾರತೀಯರಲ್ಲ ಎನ್ನುವವರು ಭಾರತೀಯರಾಗಲು ಅರ್ಹತೆ ಸಂಪಾದಿಸಬೇಕಿದೆ.

ಈ ಅರ್ಹತೆ ಸಂಪಾದಿಸಿಲ್ಲದ ಜನ ದೇಶದಲ್ಲಿ ಅಂತಃಕಲಹ ಹೆಚ್ಚಿಸಿ ಜನಾಂಗನಾಶಕ್ಕೆ ಮುಂದಾಗುವ ಮುನ್ನವೆ ದೇಶದ ಜಾತ್ಯತೀತ ನಾಯಕತ್ವ ಎಚ್ಚರವಾಗಬೇಕಿದೆ. ಆದರೆ. ಕೇವಲ ಲೌಕಿಕ ಅಭಿವೃದ್ಧಿಯ ಕಡೆಗೆ ಗಮನ ಕೊಟ್ಟು ಜನತೆಯ ಸಾಮಾಜಿಕ-ಸಾಂಸ್ಕೃತಿಕ-ಅಧ್ಯಾತ್ಮಿಕ ಶುದ್ಧಿಗೆ ಮತ್ತು ಅಭಿವೃದ್ಧಿಗೆ ಗಮನ ಕೊಡದ ಈಗಿನ ಸರ್ಕಾರಗಳ ಸಂದರ್ಭದಲ್ಲಿ ಮೂಲಭೂತವಾದಿಗಳನ್ನು ಮತ್ತು ಹಣದ ಹೆಚ್ಚುಗಾರಿಕೆಯನ್ನು ಎದುರುಗೊಳ್ಳಲು ಗಾಂಧಿ ಪ್ರತಿಪಾದಿಸಿದ ಸರಳ ಬದುಕು, ದೈಹಿಕ ದುಡಿಮೆಯ ಶ್ರೇಷ್ಠತೆ, ಮತ್ತು ವೈಯಕ್ತಿಕ ಸುಖದ ತ್ಯಾಗದಂತಹ ಅಸ್ತ್ರಗಳನ್ನು ಬಳಸಿಕೊಳ್ಳಬೇಕಿದೆ.

Add a Comment

required, use real name
required, will not be published
optional, your blog address