ಪಟ್ಟಾಭಿರಾಮ ಸೋಮಯಾಜಿ, ಯೂನಿವರ್ಸಿಟಿ ಪ್ರೊಫೆಸರ್‌ಗಳು, ಮತ್ತು ಸ್ವಾತಂತ್ರ್ಯ…

This post was written by admin on February 3, 2009
Posted Under: Uncategorized

ಇವತ್ತು ಕರ್ನಾಟಕದ ಕರಾವಳಿಯಿಂದ ಕೇಳಿಸುವ ಕೆಲವೆ ಕೆಲವು ಜನಪರ, ಪ್ರಜಾಪ್ರಭುತ್ವವಾದಿ, ಜಾತ್ಯತೀತ ಧ್ವನಿಗಳಲ್ಲಿ ಪಟ್ಟಾಭಿರಾಮ ಸೋಮಯಾಜಿಯವರದೂ ಒಂದು. ಕೋಮುವಾದ, ಶ್ರೀಮಂತಿಕೆಯ ಹಪಹಪಿ, ಜಾತಿಶ್ರೇಷ್ಠತೆ ಮತ್ತು ಮತೀಯವಾದವನ್ನೆ ದೇಶಪ್ರೇಮ ಮತ್ತು ಸಂಸ್ಕೃತಿಯ ರಕ್ಷಣೆ ಎಂದುಕೊಂಡ ಅಪಕ್ವ ಮನಸುಗಳ ವ್ಯವಸ್ಥಿತ ಸಂಚುಗಾರಿಕೆ, ಇದನ್ನೆಲ್ಲ ಅರಿಯಲಾರದ ಬಹುಸಂಖ್ಯಾತರ ವೈಚಾರಿಕ ದಾರಿದ್ರ್ಯ; ಇಂತಹ ಹಲವು ಪಿಡುಗುಗಳಿಂದ ಇವತ್ತು ಕರಾವಳಿ ಕಲುಷಿತವಾಗುತ್ತಿದೆ. ಇಡೀ ಕರ್ನಾಟಕದಲ್ಲಿ ಇವತ್ತು ಎಲ್ಲಿಯಾದರೂ ಪ್ರಗತಿಪರರಾಗಿರುವುದು, ಜಾತ್ಯತೀತನಾಗಿರುವುದು, ಒಟ್ಟು ಸಮಾಜದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವುದು ದೊಡ್ಡ ಸವಾಲಾಗಿ ಇದ್ದರೆ ಅದು ಕರಾವಳಿಯಲ್ಲಿ. ಬೇರೆ ಕಡೆ ಅದು ಸವಾಲು ಅಲ್ಲ ಅಂತಲ್ಲ. ಆದರೆ ಕರಾವಳಿಯ ಸವಾಲು ನಿಸ್ಸಂಶಯವಾಗಿ ದೊಡ್ಡದು.

ನನಗೆ ಸೋಮಾಯಾಜಿಯವರ ವೈಯಕ್ತಿಕ ಪರಿಚಯ ಇಲ್ಲ. ಆದರೆ ಅವರು ಪಾಲ್ಗೊಳ್ಳುವ ಕಾರ್ಯಕ್ರಮಗಳು ಮತ್ತು ಆಡಿದ ಮಾತುಗಳನ್ನು, ಮತ್ತು ಅವರ ಕೆಲವು ಲೇಖನ ಮತ್ತು ಪತ್ರಗಳನ್ನು ಪತ್ರಿಕೆಗಳಲ್ಲಿ ಓದಿ, ಅವರ ಬಗ್ಗೆ ತಿಳಿದಿದೆ. ಸೋಮಯಾಜಿ, ರಾಜಶೇಖರ್, ಫಣಿರಾಜ್‌ರಂತಹ ಕೆಲವು ವ್ಯಕ್ತಿಗಳು ಮಂಗಳೂರು ಮತ್ತು ಉಡುಪಿಗಳಲ್ಲಿ ಇಲ್ಲದೆ ಹೋಗಿದ್ದರೆ ನಮಗೆ ಅಲ್ಲಿಯ ಸಮಕಾಲೀನ ಕ್ರೌರ್ಯವಾಗಲಿ, ಪಟ್ಟಭದ್ರ ಪಿತೂರಿಗಳಾಗಲಿ, ಕೊನೆಗೆ ಅಲ್ಲಿಯೂ ವೈಚಾರಿಕತೆ ಮತ್ತು ಜನಪರ ಹೋರಾಟಗಳು ಜೀವಂತವಾಗಿವೆ ಎನ್ನುವುದಾಗಲಿ ಗೊತ್ತಾಗುತ್ತಿರಲಿಲ್ಲ. ಆದರೆ ಇವತ್ತು ಬಂದಿರುವ ಒಂದು ಇಮೇಯ್ಲಿನ ಮುಖಾಂತರ ತಿಳಿದಿದ್ದೇನೆಂದರೆ, ಕೋಮುವಾದಿ ಶಕ್ತಿಗಳು ಪಟ್ಟಾಭಿರಾಮ ಸೋಮಯಾಜಿಯವರ ಮೂಲಭೂತ ಹಕ್ಕುಗಳನ್ನು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನೆ ಕಸಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು. ಆ ಇಮೇಯ್ಲಿನ ಸಾರಾಂಶ ಹೀಗಿದೆ:

“Mr. Pattabhirama Somayaji, teacher of English who teaches at the University College, Mangalore has been targetted by right wing groups for his consistent remarks against their violence. Now the district-in-charge minister has directed the university to issue notice to him in a bid to dismiss him, for speaking against the “state”. This is after his speaking against the pub incident involving Sri Rama Sena in Mangalore last month. A sizeable chunk of students in the Mangalore University College, (about a hundred, led by ABVP), is demanding the removal of Mr. Pattabhirama Somayaji for speaking openly against the recent attack on the pub in Mangalore, and they had observed a forceful bundh of the college. Mr. Somayaji has been a fearless speaker and has been talking truth to power for which he has been consistently targetted in recent times. The latest development is a very dangerous one for Mr. Somayaji, for the autonomy of the University, and needless to say, for larger society.”

ಇದನ್ನೆ ಪಾಂಡಿಚೆರ್ರಿ ವಿಶ್ವವಿದ್ಯಾಲಯದ ಡಾ. ನಿಖಿಲ ಎನ್ನುವವರು ಆನ್‍ಲೈನ್ ಪೆಟಿಷನ್ ಮಾಡಿದ್ದಾರೆ.

http://www.ipetitions.com/petition/savepsomayaji/index.html

ಇದು ಎಡ-ಮಧ್ಯಮ-ಬಲ ಸಿದ್ಧಾಂತದ ಪ್ರಶ್ನೆಯಲ್ಲ. ವ್ಯವಸ್ಥೆಯಲ್ಲಿನ ದೋಷದ ವಿರುದ್ಧ ಧ್ವನಿಯೆತ್ತುವ ಮಾನಸಿಕ ಸ್ಥೈರ್ಯ ಮತ್ತು ಸಾಮಾಜಿಕ ಬದ್ಧತೆ ಇರುವ ಎಲ್ಲರಿಗೂ ಸಂಬಂಧಿಸಿದ ಪ್ರಶ್ನೆ ಇದು. ಒಟ್ಟು ಸಮಾಜದ ಒಳಿತಿಗಾಗಿ ಮಾತನಾಡುವವರು ಇವರು. ಒಂದು ಆದರ್ಶ ವ್ಯವಸ್ಥೆಯ ಕನಸಿಟ್ಟುಕೊಂಡು ಮಾತನಾಡುವವರು ಇವರು. ಸಮಾಜದಲ್ಲಿ ಒಂದು ಸಭ್ಯ ನಾಗರಿಕ ವ್ಯವಸ್ಥೆಗಾಗಿ ತಮ್ಮನ್ನು ತಾವು ವೈಯಕ್ತಿಕ ನೋವು-ಕಷ್ಟಗಳಿಗೆ ಒಡ್ಡಿಕೊಳ್ಳುವವರು ಇವರು. ಎಷ್ಟೋ ಸಮಯ ತಾವು ಯಾವ ಸಮಾಜದ ಒಳಿತಿಗಾಗಿ ಆ ನೋವನ್ನು ಸ್ವೀಕರಿಸಿರುತ್ತಾರೊ ಅದೇ ಸಮಾಜದ ತಾತ್ಸಾರಕ್ಕೆ ಒಳಗಾಗುವವರು ಇವರು.

ಇನ್ನು ನಮ್ಮ ಯೂನಿವರ್ಸಿಟಿಗಳ ಸ್ಥಿತಿಯ ಬಗ್ಗೆ. ಇಲ್ಲಿಂದ ಯಾವೊಂದು ಹೊಸ ವಿಚಾರಗಳಾಗಲಿ, ಚಿಂತನೆಯಾಗಲಿ, ಬರುತ್ತಿರುವುದು ಸಂದೇಹ. ಇವತ್ತು ಕರ್ನಾಟಕದಲ್ಲಿ ಎಲ್ಲಿಯಾದರೂ ಯಾರಿಗಾದರೂ ಅವರ ಸಾಮಾಜಿಕ ಬದ್ಧತೆಯನ್ನು ಮತ್ತು ಅವರ ಕನಿಷ್ಠ ಜವಾಬ್ದಾರಿಯನ್ನು ನೆನಪಿಸಬೇಕಿದ್ದರೆ, ಅದು ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಲೆಕ್ಚರರ್‌ಗಳಿಗೆ. ಬಹುಪಾಲು ಎಲ್ಲಾ ವಿಷಯಗಳಿಗೂ ಒಂದಲ್ಲ ಒಂದು ವಿಧದಲ್ಲಿ ಸ್ಪಂದಿಸಬೇಕಾದ, ರಿಯಾಕ್ಟ್ ಮಾಡಬೇಕಾದ, ಜನಕ್ಕೆ ಅಧ್ಯಯನದ ಮೂಲಕ ವಿವರಿಸಬೇಕಾದ, ಮಾರ್ಗದರ್ಶನ ನೀಡಬೇಕಾದ ಈ ವಿಶ್ವವಿದ್ಯಾನಿಲಯಗಳ ಪ್ರೊಫೆಸರ್‌ಗಳು ಇವತ್ತು ಆ ಯಾವುದನ್ನೂ ಮಾಡುವ ಹಾಗೆ ಕಾಣಿಸುತ್ತಿಲ್ಲ. ಕೆಲವೆ ಕೆಲವು ಜನರನ್ನು ಬಿಟ್ಟರೆ ಕರ್ನಾಟಕದಲ್ಲಿ ಬಹುಪಾಲು ಯೂನಿವರ್ಸಿಟಿ ಪ್ರೊಫೆಸರ್‌ಗಳು ಅನಾಮಧೇಯರಾಗಿ, ಸ್ವಾರ್ಥಿಗಳಾಗಿ, ಅಯೋಗ್ಯರಾಗಿ ಬದುಕುತ್ತಿದ್ದಾರೆ. ಸೈಧ್ಧಾಂತಿಕ ವಿರೋಧವಾಗಲಿ, ವೈಚಾರಿಕ ವಿರೋಧವಾಗಲಿ ಕಾಣಿಸಬೇಕಾದಷ್ಟು ಕಾಣಿಸುತ್ತಲೆ ಇಲ್ಲ. ಸ್ವತಂತ್ರ ಮನೋಭಾವದ ಹೊರತಾಗಿ ಅಧಿಕಾರಕ್ಕೆ, ಸರ್ಕಾರಕ್ಕೆ, ಜಾತಿಗೆ, ಗುಲಾಮರಾಗಿ ಹೋಗಿದ್ದಾರೆ ಬಹುಸಂಖ್ಯಾತ ಮೇಷ್ಟ್ರುಗಳು. ಇನ್ನು ಪಟ್ಟಾಭಿರಾಮ ಸೋಮಯಾಜಿಯವರ ಮೇಲೆ ಅಧಿಕಾರಸ್ಥರು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನೋಡಿ ಯೂನಿವರ್ಸಿಟಿಗಳ ಮೇಷ್ಟ್ರುಗಳು ಇನ್ನೂ ಪುಕ್ಕಲರಾಗಿ ಹೋಗುತ್ತಾರೆ. ಸಮಾಜಕ್ಕೆ ಇರಬೇಕಾದ ತಮ್ಮ ನಿಷ್ಠೆಯನ್ನು ಮರೆತುಬಿಡುತ್ತಾರೆ. ಅವರ ಆ ತಪ್ಪಿನಲ್ಲಿ ಬೆಂಬಲಿಸಬೇಕಾದಾಗ ಬೆಂಬಲಿಸದ ನಮ್ಮ ಪಾಲೂ ಇರುತ್ತದೆ.

ಸ್ನೇಹಿತರೆ, ಹಾಗಾಗಿ ಮೇಲಿನ ಕೊಂಡಿಯಿರುವ ಪುಟಕ್ಕೆ ಹೋಗಿ ಅದಕ್ಕೆ ನಿಮ್ಮ ಬೆಂಬಲವನ್ನು ಸೂಚಿಸಿ. ಬಹುಶಃ ಈ ಪೆಟಿಷನ್ ಸಿದ್ಧಪಡಿಸಿರುವವರು ಅದನ್ನು ಕೊನೆಗೆ ರಾಜ್ಯಪಾಲರಿಗೊ, ಕೇಂದ್ರಸರ್ಕಾರಕ್ಕೊ, ಅಥವ ಸಂಬಂಧಪಟ್ಟ ಇಲಾಖೆಗೊ ಕಳುಹಿಸುತ್ತಾರೆ. ಸದ್ಯದ ಸ್ಥಿತಿಯಲ್ಲಿ ಎಲ್ಲೆಲ್ಲಿ ಬೆಳಕಿನ ದೊಂದುಗಳು ಇವೆಯೊ ಅವೆಲ್ಲವನ್ನೂ ನಾವು ಕಾಪಾಡಿಕೊಳ್ಳಬೇಕು.

ಈಗಾಗಲೆ ಕನ್ನಡದ ಹಲವಾರು ಲೇಖಕರು (ನಟರಾಜ್ ಹುಳಿಯಾರ್, ಸಿ.ಎನ್. ರಾಮಚಂದ್ರ, ರಹಮತ್ ತರಿಕೆರೆ, ಓಎಲ್‍ಎನ್ ಸ್ವಾಮಿ, ಕೆ.ವಿ. ತಿರುಮಲೇಶ್, ಇತ್ಯಾದಿ) ಈ ಆನ್‌ಲೈನ್ ಪೆಟಿಷನ್‍ಗೆ ಸಹಿ ಹಾಕಿದಂತಿದೆ. ನನಗೆ ಈ ವಿಷಯಕ್ಕೆ ಕೇವಲ ಸಹಿ ಹಾಕಿದರೆ ಸಾಲದು, ನನ್ನ ಬ್ಲಾಗಿನಲ್ಲಿ ನಾಲ್ಕು ಸಾಲು ಬರೆಯಬೇಕು ಎನ್ನಿಸಿತು. ದಯವಿಟ್ಟು ನೀವೂ ನಿಮಗೆ ತೋಚಿದ ಹಾಗೆ ಮಾಡಿ.

ರವಿ…

Add a Comment

required, use real name
required, will not be published
optional, your blog address