ಇದ್ದಿಲು ಮಾಡುತ್ತ ಕುರುಡಾಗುವರು; ದೇವಿಯ ಮೆರವಣಿಗೆಯಲ್ಲಿ ಹೆಂಗಸರಿಲ್ಲ!

This post was written by admin on April 28, 2009
Posted Under: Uncategorized

ಇದ್ದಿಲು ಮಾಡುತ್ತ ಕಣ್ಣು ಕಳೆದುಕೊಳ್ಳುವವರು

ಅಂದು ಮಾಗಡಿಯ ಹಳ್ಳಿಯಿಂದ ಹಾಸನಕ್ಕೆ ಹೋಗುತ್ತಿದ್ದೆ. ದಾರಿಯಲ್ಲಿ ಹೆದ್ದಾರಿಗೆ ಹತ್ತಿರದಲ್ಲಿಯೆ ಸುಮಾರು ಹತ್ತಾರು ಎಕರೆ ವಿಸ್ತೀರ್ಣದಲ್ಲಿ ದಟ್ಟ ಬಿಳಿ ಹೊಗೆ ಕಾಣಿಸಿತು. ಪರಿಸರ-ಹೊಗೆ-ತಾಪಮಾನ ಏರಿಕೆ-ಜೀವನ-ದುಡಿಮೆ, ಹೀಗೆ ಓಡಿದ ಮನಸ್ಸು ಅದೇನೆಂದು ನೋಡಲು ಪ್ರಚೋದಿಸಿತು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಜಾಗ ಅದು. ಹಾಸನ ಜಿಲ್ಲೆಯ ಗಡಿ ಬಹುಶಃ ಒಂದೆರಡು ಕಿ.ಮೀ. ಅದು ಕೊಬ್ಬರಿ ಚಿಪ್ಪನ್ನು ಇದ್ದಿಲು ಮಾಡುವ ದೇಸೀ ಉದ್ದಿಮೆ!


ಕೊಬ್ಬರಿಚಿಪ್ಪನ್ನು ಇದ್ದಿಲು ಮಾಡುತ್ತ ಹೊಟ್ಟೆ ಹೊರೆದುಕೊಳ್ಳುವವರು

ಇಲ್ಲಿರುವ ವಿಡಿಯೊ ತಾನೆತಾನಾಗಿ ಒಂದಷ್ಟು ವಿವರಣೆ ಕೊಡುತ್ತದೆ. ಅದಕ್ಕೆ ಇಲ್ಲಿ ಗದ್ಯದ ಅಗತ್ಯವಿಲ್ಲ. ಇದ್ದಿಲು ಆದಬಳಿಕ ಆ ಆಳೆತ್ತರದ ಗುಂಡಿಗಳಿಗೆ ಇಳಿದು ಅದನ್ನು ಹೊರತೆಗೆಯುತ್ತಾರಂತೆ. ಆ ದೃಶ್ಯ ಸಿಗಲಿಲ್ಲ. ಅದು ಹೇಗಿರಬಹುದು, ಅದರಲ್ಲಿ ಇಳಿದವರು ಯಾವ ರೀತಿ ಕಾಣಿಸುತ್ತಾರೆ, ಆ ಗುಂಡಿಯ ಒಳಗೆ ಉಷ್ಣಾಂಶ ಮತ್ತು ಗಾಳಿ ಯಾವ ರೀತಿ ಇರುತ್ತದೆ, ನೀವೆ ಊಹಿಸಿಕೊಳ್ಳಿ.

ಇನ್ನೂ ಇನ್ನೆಂತೆಂತಹ ಕಠಿಣ ದುಡಿಮೆ ಮಾಡುತ್ತ ಜನ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೊ? ಏನಾಯಿತು ಇಷ್ಟು ದಿನವೂ ಆದ ‘Wealth Creation’ ಮತ್ತು ‘ಅಭಿವೃದ್ಧಿ’? ಇವರಿಗೆ ಎಂದಾದರೂ ಅದರಲ್ಲಿ ಪಾಲು ಇದೆಯಾ? ನವಸಂದರ್ಭದ ಯಾವುದೇ Decent ಉದ್ಯೋಗ ಇವರಿಗೆ ಸಿಗಲು ಸಾಧ್ಯವೆ?


ದೇವಿಯ ಮೆರವಣಿಗೆಯಲ್ಲಿ ಹೆಂಗಸರಿಲ್ಲ !

ಮುಂದಕ್ಕೆ ಚನ್ನರಾಯಪಟ್ಟಣದಲ್ಲಿ ದೇವರ ಮೆರವಣಿಗೆ ಕಾಣಿಸಿತು. ವಿವಿಧ ರೀತಿಯ ಬಣ್ಣಬಣ್ಣದ ವೇಷ ಧರಿಸಿ, ಜನಪದರ ದೇಶೀಯ ಕುಣಿತ ಕುಣಿಯುತ್ತ ಹೋಗುತ್ತಿದ್ದರು. ಗಾಡಿ ನಿಲ್ಲಿಸಿ, ಆ ಮೆರವಣಿಗೆ ನೋಡಲು ಹೊರಟೆ. ನಾಲ್ಕೈದು ನಿಮಿಷ ಅದರ ವಿಡಿಯೊ ಹಿಡಿದುಕೊಂಡೆ. ಕತ್ತಿ ಹಿಡಿದುಕೊಂಡು ಬಣ್ಣಬಣ್ಣದ ವೇಷಧಾರಿ, ಡೋಲು-ತಮ್ಮಟೆ ಬಾರಿಸುವವರು, ಶಹನಾಯಿ ಊದುವವರು, ಈಡುಗಾಯಿ ಹೊಡೆಯುವವರು, ಉಸ್ತುವಾರಿ ವಹಿಸಿದ್ದವರು; ಸುಮಾರು ನೂರಿನ್ನೂರು ಜನ ಹೋಗುತ್ತಿದ್ದ ಮೆರವಣಿಗೆ ಅದು.


ಚನ್ನರಾಯಪಟ್ಟಣದಲ್ಲಿ ಕಂಡ ದೇವಿಯರಿಲ್ಲದ “ದೇವಿ ಮೆರವಣಿಗೆ”

ನಂತರ ವಾಪಸು ಬರುತ್ತ ಕೆಲವು ಸಾಮಾಜಿಕ ವಿಷಯಗಳ ಬಗ್ಗೆ ಯೋಚಿಸುತ್ತಿದ್ದೆ. ಆ ಇಡೀ ಮೆರವಣಿಗೆಯಲ್ಲಿ, ಕುಣಿತದಲ್ಲಿ, ಪೂಜೆಯಲ್ಲಿ, ಒಬ್ಬಳೇ ಒಬ್ಬ ಹೆಂಗಸು ಕಾಣಿಸಲಿಲ್ಲ. ಅದು, “ಕೋಟೆ ಮಾರಿಕಾಂಬ ದೇವತೆ”ಯ ಮೆರವಣಿಗೆ! ಅಲ್ಲಿ ವಯಸ್ಕ ಹೆಂಗಸರಿರಲಿ ಕನಿಷ್ಠ ಹುಡುಗಿಯರು-ಯುವತಿಯರು ಪಾಲ್ಗೊಳ್ಳುವಂತಹ ಅವಕಾಶವೇ ಇಲ್ಲ. ಈ ದೇವರು-ಮೆರವಣಿಗೆ-ಕುಣಿತ-ಸಂಭ್ರಮ-ಆನಂದ, ಎಲ್ಲವೂ ಗಂಡಸರಿಗೆ ಸೀಮಿತ. ಅಲ್ಲಿಯ ಗ್ರಾಮೀಣ ಹೆಂಗಸರಿಗೂ ಒಂದಷ್ಟು ಕೆಲಸ ಇರುತ್ತದೆ. ಮನೆಯ ಮುಂದೆ ದೇವರು ಬಂದಾಗ ಪೂಜೆಗೆ ಕಡ್ಡಿ-ಕಾಯಿ ಕೊಡುವುದು, ಆರತಿ ಎತ್ತುವುದು, ಮನೆಯಲ್ಲಿ ವಿಶೇಷ ಅಡಿಗೆ ಮಾಡುವುದು, ಸ್ನಾನಕ್ಕೆ ನೀರು ಕಾಯಿಸುವುದು, ಇತ್ಯಾದಿ ಇತ್ಯಾದಿ. ಆದರೆ ಕುಣಿತ ಇಲ್ಲ, ಹಾಡು ಇಲ್ಲ, ವಾದ್ಯ ಇಲ್ಲ, ವೇಷಭೂಷಣಗಳಿಲ್ಲ, ದೇವರ ರಥಕ್ಕೆ ಅವರ ಕೈಯ್ಯಿಲ್ಲ. ಅಣ್ಣತಮ್ಮಂದಿರ ಜೊತೆ ಕಾಲುಹಾಕುವಂತಿಲ್ಲ. ಅಪ್ಪ ಹೆಗಲ ಮೇಲೆ ಹೊತ್ತು ಹೋಗುವುದಿಲ್ಲ. ಮಗ ಕರೆಯುವುದಿಲ್ಲ. ಮನೆಯ ಹೊರಗಡೆ ಸಂಭ್ರಮ ಹಂಚಿಕೊಳ್ಳುವಂತಿಲ್ಲ. ಪಾಲ್ಗೊಳ್ಳುವಂತಿಲ್ಲ.

ಗ್ರಾಮೀಣ, ಅರೆ-ಗ್ರಾಮೀಣ ಪರಿಸರದಲ್ಲಿ ಹೆಣ್ಣಿಗೆ ಸಾಂಸ್ಕೃತಿಕ ಲೋಕಕ್ಕೆ ಎಷ್ಟು ಮಾತ್ರದ ಪ್ರವೇಶ ಇದೆ? ಈ ಪ್ರಶ್ನೆಗೆ ಗ್ರಾಮೀಣ ಭಾರತ ಉತ್ತರ ಹುಡುಕಿಕೊಳ್ಳಬೇಕಿದೆ. ಸಂಪ್ರದಾಯದಲ್ಲಿ ಬಂದ ಎಲ್ಲವೂ ಒಳ್ಳೆಯವೇನೂ ಅಲ್ಲ. ವಿಶೇಷವಾಗಿ ಕಟ್ಟುಪಾಡುಗಳು.

Add a Comment

required, use real name
required, will not be published
optional, your blog address