ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ?

This post was written by admin on April 29, 2009
Posted Under: Uncategorized

ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು
ಮದುವೆಯಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಮುದ್ದಾದ ಎರಡು ಮಕ್ಕಳಾಗುತ್ತೆ!

–ಸವಿತಾ ನಾಗಭೂಷಣ

ಬಹುಶಃ ನನ್ನ Restless ಮನಸ್ಥಿತಿಯಿಂದಾಗಿಯೊ ಅಥವ ಮತ್ತಿನ್ನೆಂತದ್ದಕ್ಕೊ ಪದ್ಯ-ಕವನ ಓದುವುದು ನನಗೆ ಬಹಳ ಕಷ್ಟ. ಅವನ್ನು ಕತೆ-ಕಾದಂಬರಿ ಓದುವಂತೆ ಬಾಯಿ ತೆರೆಯದೆ ಓದಿಕೊಂಡರೆ ಅವನ್ನು ಅರ್ಥ ಮಾಡಿಕೊಳ್ಳುವುದು, ಪದಗಳ ಮತ್ತು ಭಾವದ ಅರಿವು ಮೂಡುವುದು ಕಷ್ಟವೇನೊ. ಜೊತೆಗೆ ಅದನ್ನು ಗದ್ಯ ಓದಿದಂತೆ ನಿಲ್ಲಿಸದೆ ಸುಮ್ಮನೆ ಓದಿಕೊಂಡು ಹೋಗುವುದೂ ಸರಿಯಲ್ಲವೇನೊ. ಏನೇ ಇರಲಿ ನನ್ನ ಕವನಗಳ ಓದು ಬಹಳ ಸೀಮಿತ. ಎಲ್ಲೋ Referenceಗೆ ಬೇಕಾದಷ್ಟು ಮಾತ್ರ. ಆದರೆ ಆ ಕವನಗಳ ವಾಚನ ಕೇಳಿದಾಗ ಅಥವ ಅವುಗಳ ಹಾಡು ಕೇಳಿದಾಗ ಕವನದ ಶಕ್ತಿ ಮತ್ತು ಸಾಮರ್ಥ್ಯ ನೋಡಿ ಬೆರಗಾಗಿದ್ದೇನೆ. ಕಮ್ಮಿ ಪದಗಳಲ್ಲಿ ಒಂದು ವಿಚಾರವನ್ನು ದೀರ್ಘಕಾಲೀನ ಹಿಡಿದಿಟ್ಟುಕೊಳ್ಳಬೇಕಾದರೆ ಕವನವೇ ಸರಿ.

ಕಳೆದ ತಿಂಗಳು ಮೂರ್ನಾಲ್ಕು ದಿನಗಳ ಕಾಲ ನಾಗಭೂಷಣ ದಂಪತಿಗಳ ಜೊತೆಗಿದ್ದೆ. ಸವಿತಾ ನಾಗಭೂಷಣ ಕಾವ್ಯಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕವಯತ್ರಿ. ಕಾವ್ಯಕ್ಕಾಗಿ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕವಯತ್ರಿ ಅವರು. ಅವರ ಗದ್ಯ ಮಾತ್ರ ಓದಿರುವ ನನಗೆ ಅವರ ಪದ್ಯ ಓದಲಾಗಿರಲಿಲ್ಲ. ಎರಡು ವರ್ಷದ ಹಿಂದೆ ಅವರಿಂದ ಅವರ ಕವನ ಸಂಕಲನವೊಂದನ್ನು ತೆಗೆದುಕೊಂಡಿದ್ದೆ. ಆಗಿನ ಸ್ಥಿತಿಯಲ್ಲಿ ನಾನದನ್ನು ಓದಲಾಗಿರಲಿಲ್ಲ. ಜೊತೆಗೆ ಕವನ ಓದುವ ಮನಸ್ಥಿತಿಯೂ ಇರಲಿಲ್ಲ. ಆದರೆ ಈ ಸಲ ಅವರ ಒಂದಷ್ಟು ಕವನಗಳನ್ನು ಅವರಿಂದಲೆ ವಾಚನ ಮಾಡಿಸಿ ಅದನ್ನು ರೆಕಾರ್ಡ್ ಮಾಡಿಕೊಳ್ಳಬೇಕು ಎಂದು ಅವರನ್ನು ನೋಡಲು ಹೋಗುವ ಮೊದಲೆ ತೀರ್ಮಾನಿಸಿದ್ದೆ. ಈಗ ಅವರ ಕವನ-ವಾಚನ Youtube ನಲ್ಲಿದೆ.

ಈ ವಿಡಿಯೋದಲ್ಲಿ ಆರೇಳು ಕವನಗಳಿವೆ. ಇಲ್ಲಿರುವ ಬಹುಪಾಲು ಕವನಗಳು ಏಪ್ರಿಲ್ 5 ರಂದು ಶಿವಮೊಗ್ಗದಲ್ಲಿ ಬಿಡುಗಡೆಯಾದ ಅವರ ’ದರುಶನ’ ಕವನ ಸಂಕಲನದಲ್ಲಿ ಪ್ರಕಟವಾಗಿವೆ. ಒಂದೆರಡು ಅವರ ಬೇರೆ ಕವನ ಸಂಕಲನಗಳಿಂದ ಆಯ್ದದ್ದು. ನಿಮಗೆ ಇಷ್ಟವಾದ ಆರೇಳು ಕವನಗಳನ್ನು ಓದಿ ಎಂದಿದ್ದೆ. Youtube ನ ಹತ್ತುನಿಮಿಷದ ಮಿತಿಯಿಂದಾಗಿ ಅದಕ್ಕೆ ಹೊಂದುವಂತೆ ಒಂದಷ್ಟನ್ನು ಆರಿಸಿ ಮಿಕ್ಕದ್ದನ್ನು ಎಡಿಟ್ ಮಾಡಿದ್ದೇನೆ. (ಅವರ ಬಗ್ಗೆ ಈ ವಿಡಿಯೋದಲ್ಲಿ ಸ್ವಲ್ಪ ಆಡಿಯೊ ಪರಿಚಯ ಕೊಡೋಣ ಎಂದುಕೊಂಡೆ. ಆದರೆ ಸಮಯದ ಮಿತಿಯಿಂದಾಗಿ ಅವರು ಮತ್ತು ಅವರ ಪದ್ಯಗಳೇ ಮಾತನಾಡಲಿ, ಮಿಕ್ಕದ್ದನ್ನು ಬ್ಲಾಗ್‌ನಲ್ಲಿ ಬರೆದರಾಯಿತೆಂದು ಸುಮ್ಮನಾದೆ.)


ಸವಿತಾ ನಾಗಭೂಷಣರ ಸ್ವರಚಿತ ಕವನಗಳ ಓದು

ಈ ತಿಂಗಳ ಮೊದಲ ದಿನ ಹಂಪಿಯ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದೆ. ಇಂಟರ್ನೆಟ್‌ನಲ್ಲ್ಲಿ ಕನ್ನಡದ Content ಜಾಸ್ತಿಯಾಗಬೇಕು; ಅದು ಬರಹ, ಆಡಿಯೊ, ವಿಡಿಯೊ, ಎಲ್ಲಾ ರೂಪದಲ್ಲಿಯೂ ಇರಬೇಕು; ಅದನ್ನು ಹಂಪಿ ವಿಶ್ವವಿದ್ಯಾಲಯವೂ ಮಾಡಬೇಕು; ತಾವು ಪ್ರಕಟಿಸುವ ಪುಸ್ತಕ ಮತ್ತು ಥಿಸೀಸ್‌ಗಳನ್ನು ಅಂತರ್ಜಾಲಕ್ಕೆ ಹಾಕಬೇಕು; ಅವೆಲ್ಲವೂ ಯೂನಿಕೋಡ್ ರೂಪದಲ್ಲಿ ಇರಬೇಕು; ಸರ್ಚ್ ಮಾಡಿದರೆ ಸುಲಭವಾಗಿ ಸಿಗುವಂತಾಗಬೇಕು; ಹೀಗೆ ಮಾತನಾಡಿದ್ದೆ. ಇದು ನಮ್ಮ ವಿಶ್ವವಿದ್ಯಾಲಯಗಳ ಕುಲಪತಿಗಳ ಮನದಲ್ಲಿ ಬರಬೇಕು. ನಮ್ಮ ಆಶಯದಿಂದಷ್ಟೆ ಇದು ಸಾಧ್ಯವಾಗುವುದಿಲ್ಲ. ಆದರೆ ವೈಯಕ್ತಿಕವಾಗಿ ನಮ್ಮ ಪ್ರಯೋಗಗಳನ್ನು ನಾವು ಮಾಡುತ್ತಿರಬೇಕು. ಹಾಗಾಗಿಯೆ ಈ ಸಲದ ನನ್ನ ಪ್ರವಾಸದಲ್ಲಿ ಇಂತಹುದೊಂದು ಪ್ರಯತ್ನ ಮಾಡಲು ನಾನು ಮನಸ್ಸು ಮಾಡಿದ್ದು. ಬಹುಶಃ Youtube ಪ್ರವೇಶಿಸಿದ ಮೊದಲ ಕನ್ನಡ ಕವಯತ್ರಿಯೂ ಸವಿತಾರವರೆ ಇರಬಹುದು. ಕನ್ನಡದ ಯುವ ಕವಿ-ಲೇಖಕರಾದರೂ ಕನಿಷ್ಠ ಇಂತಹುದೊಂದು ಪ್ರಯತ್ನಕ್ಕೆ ತೊಡಗಲಿ ಎಂದು ಈ ಮೂಲಕ ಹಾರೈಸುತ್ತೇನೆ. ಹಾಗೆಯೆ ಹೀಗೆ ನನ್ನಂತೆ ಮಾಡಲು ಸಾಧ್ಯವಿರುವವರು ತಮ್ಮ ಮೆಚ್ಚಿನ ಕವಿ-ಲೇಖಕರ ವಾಚನಗಳನ್ನು ಹೀಗೆ ಪ್ರಸ್ತುತಿಪಡಿಸಲು ಸಾಧ್ಯವಾದರೆ ಇಂಟರ್ನೆಟ್‌ನಲ್ಲಿ ಕನ್ನಡ ವಿವಿಧ ರೂಪಗಳಲ್ಲಿ ಹರಿದಾಡುತ್ತದೆ. ಭಾಷೆಯನ್ನು ಬೆಳೆಸಲು (’ಉಳಿಸಲು’ ಎಂಬ ಪದ ಹೀನಾಯ ಸ್ಥಿತಿಯನ್ನು ತೋರಿಸುತ್ತದೆ) ನಾನಾ ಮಾರ್ಗಗಳಿವೆ. ಅಷ್ಟಕ್ಕೂ ಅದರ ಅಂತಿಮ ಉದ್ದೇಶ ಮತ್ತು ಅಗತ್ಯ ಸಂವಹನ ಮತ್ತು ವಿಚಾರಪ್ರಸರಣ ತಾನೆ.

ಇಲ್ಲಿ ನಾನು ಮೇಲೆ ಉದಾಹರಿಸಿರುವ ಭಾಗ ಸವಿತಾರವರ “ಏನಾಗುತ್ತೆ” ಕವನದಿಂದ. ಅದರ ಪೂರ್ಣ ಪಾಠ ಇಲ್ಲಿದೆ.

ಏನಾಗುತ್ತೆ?

ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು
ಮದುವೆಯಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಮುದ್ದಾದ ಎರಡು ಮಕ್ಕಳಾಗುತ್ತೆ!

ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ
ಇಟ್ಟರೆ ಏನಾಗುತ್ತೆ?
ಏನೂ ಆಗೊಲ್ಲ,
ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ!

ಹಿಂದೂಸ್ಥಾನ-ಪಾಕಿಸ್ಥಾನ
ಒಂದಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಅಶಾಂತಿ ಆತಂಕ ಕಮ್ಮಿಯಾಗುತ್ತೆ!

ಹೇಳು… ಏನಾಗುತ್ತೆ, ಏನಾಗುತ್ತೆ?
ಹಿಂದೂಸ್ಥಾನ-ಪಾಕಿಸ್ಥಾನ ಒಂದಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಒಂದು ಹಳೆಯ ರೋಗ ವಾಸಿಯಾಗುತ್ತೆ!

–ಸವಿತಾ ನಾಗಭೂಷಣ

ಈ ಮೇಲಿನ ವಿಡಿಯೋದಲ್ಲಿರುವ ಇತರ ಕವನಗಳು:

  • ರಾಮ-ಕೃಷ್ಣ-ಶಿವ
  • ಭಯೋತ್ಪಾದಕ
  • ಏನಾಗುತ್ತೆ?
  • ಏನಾಗುವೆ?
  • ಗಾಂಧಿ
  • ಕನಕ-ಕೃಷ್ಣ
  • ಜಾತ್ರೆಯಲ್ಲಿ ಶಿವ

‘ದರುಶನ’ ಸಂಕಲನದ ಮುಖಪುಟದ ಹಿಂಬದಿಯಲ್ಲಿರುವ ಕವಿ-ಪರಿಚಯ

ಸವಿತಾ ನಾಗಭೂಷಣ ಚಿಕ್ಕಮಗಳೂರಿನಲ್ಲಿ ಜನಿಸಿದವರಾದರೂ, ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಮಲೆನಾಡಿನ ರಾಜಧಾನಿ ಎನಿಸಿದ ಶಿವಮೊಗ್ಗದಲ್ಲಿ. ಹಾಗಾಗಿಯೇ ಇವರ ಬಹಳಷ್ಟು ಕವನಗಳು ಬೆಟ್ಟ-ಗುಡ್ಡ-ಕಾಡು, ಗಿಡ-ಮರ-ಬಳ್ಳಿ, ಹಸಿರು-ಹೂ=ಹಣ್ಣು ಮತ್ತು ಹೊಳೆ-ಮಳೆ-ಮೋಡಗಳಿಂದ ಜೀವಂತವಾದ ರೂಪಕಗಳಿಂದ ನಳನಳಿಸುತ್ತವೆ. ಇವುಗಳ ಹಿನ್ನೆಲೆಯೊಂದಿಗೇ ಇವರ ಪದ್ಯಗಳು, ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿಗಳನ್ನೂ, ದು:ಖ-ವಿಷಾದಗಳನ್ನೂ ಅಂತಃಕರಣಪೂರ್ವಕವಾಗಿ ಹಿಡಿದಿಡುತ್ತವೆ. ಬಹುಶ: ಈ ಕಾರಣಗಳಿಂದಾಗಿಯೇ, ಇವರ ಕವನಗಳು ಸಾಮಾನ್ಯ ಓದುಗರು ಮತ್ತು ವಿಮರ್ಶಕರಿಬ್ಬರ ಗಮನವನ್ನೂ ಸೆಳೆದಿವೆ.

ಕಾವ್ಯಕ್ಕಾಗಿ (‘ನಾ ಬರುತ್ತೇನೆ ಕೇಳು’) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದ ಮೊದಲ ಕವಯತ್ರಿಯಾದ ಸವಿತಾ, ತಮ್ಮ ಎಲ್ಲ ಕವನ ಸಂಕಲನಗಳಿಗೂ ಬೇರೆ ಬೇರೆ ಸಂಘ ಸಂಸ್ಥೆಗಳಿಂದ ಬಹುಮಾನ-ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ವಿಶಿಷ್ಟ ಕಾದಂಬರಿ ‘ಸ್ತ್ರೀಲೋಕ’ಕ್ಕೆ ಎಂ.ಕೆ.ಇಂದಿರಾ ಮತ್ತು ಬಿ.ಎಚ್.ಶ್ರೀಧರ ಪ್ರಶಸ್ತಿಗಳು ಸಂದಿವೆ. ಕೆಲ ಕಾಲ ‘ಸಾಹಿತ್ಯ ಸಂವಾದ’ ಎಂಬ ಸಾಹಿತ್ಯಿಕ-ಸಾಂಸ್ಕೃತಿಕ ದ್ವೈಮಾಸಿಕದ ಸಂಪಾದಕರಾಗಿದ್ದ ಸವಿತಾ, ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದ ‘ಸುವರ್ಣ ಕಾವ್ಯ’ ಬೃಹತ್ ಸಂಪುಟದ ಸಂಪಾದಕರಲ್ಲೊಬ್ಬರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಇತಿಹಾಸದಲ್ಲಿ ಸ್ನಾತಕೋತ್ತರ ಪಡೆದಿರುವ ಸವಿತಾ ನಾಗಭೂಷಣ, ಸದ್ಯಕ್ಕೆ ತಮ್ಮ ಪತಿ ಡಿ.ಎಸ್.ನಾಗಭೂಷಣ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.

Reader Comments

Savithajis fantasy and imagination seems wonderful and it would be nice to live in her poem. However the reality bites.. For those who get carried away by idealism, it will pay to read the Indian laws governing marriage between majority and minority.
I am virtually not against any kind of marriage, however totally against government telling individuals what happens once you fall in love with somebody else.

#1 
Written By Kannadiga on June 21st, 2009 @ 11:41 am

Add a Comment

required, use real name
required, will not be published
optional, your blog address