ಅತಿ ದೌರ್ಭಾಗ್ಯದ ಹಾಲಿ ವಿಧಾನಸಭೆ

This post was written by admin on July 30, 2009
Posted Under: Uncategorized

[ಇದು "ಮಾರ್ಥಾ ಸ್ಟುವರ್ಟಳೂ, ಕೃಷ್ಣಯ್ಯ ಶೆಟ್ಟಿಯೂ..." ಲೇಖನದ ಮುಂದುವರೆದ ಭಾಗ/ಟಿಪ್ಪಣಿ.]

ಈ ಸಲದ ವಿಧಾನಸಭಾ ಶಾಸಕರಲ್ಲಿ ಇರುವುದೆ ಮೂರು ಗುಂಪು. ಹಾಲಿ ಆಡಳಿತ ಪಕ್ಷದ ಬಿಜೆಪಿ ಒಂದು ಗುಂಪಾದರೆ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಆಡಳಿತದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನೆರಡು ಗುಂಪುಗಳು. ಪಕ್ಷೇತರರಲ್ಲಿ ಐದು ಜನ ಬಿಜೆಪಿಯೊಂದಿಗಿದ್ದಾರೆ. ಇನ್ನೊಬ್ಬರನ್ನು ಸದ್ಯಕ್ಕೆ ಕಾಂಗ್ರೆಸ್‌ನೊಂದಿಗೇ ಗುರುತಿಸಬಹುದು. ಅಂದರೆ, ಇರುವ ಈ ಮೂರು ಗುಂಪುಗಳೂ ಕಳೆದ ಹತ್ತು ವರ್ಷಗಳಲ್ಲಿ ಒಂದಲ್ಲ ಒಂದು ಸಮಯದಲ್ಲಿ ಆಡಳಿತ ನಡೆಸಿದವರೆ. ಸಾಧ್ಯವಾದಾಗ ತಮ್ಮತಮ್ಮ ಸಮಯದಲ್ಲಿ ಬಾಚಲು ಪ್ರಯತ್ನಿಸಿದವರೆ ಮತ್ತು ತಕ್ಕಮಟ್ಟಿಗೆ ಯಶಸ್ವಿಯಾದವರೆ. ಅಧಿಕಾರವನ್ನು ತಮ್ಮ ಶಕ್ತ್ಯಾನುಸಾರ ಉಪಯೋಗ-ದುರುಪಯೋಗ ಮಾಡಿಕೊಂಡವರೆ. ಹಾಗಾಗಿ ಈಗ ಸದ್ಯದ ಸರ್ಕಾರದ ಯಾವ ಹಗರಣವನ್ನಾದರೂ ಶಾಸನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪ್ರಸ್ತಾಪಿಸಲಿ, ಆಡಳಿತ ಪಕ್ಷದಿಂದ ಕೂಡಲೆ ಸಿದ್ಧ ಉತ್ತರ ಬರುತ್ತದೆ: “ನೀವೂ ಇದನ್ನೆ ಮಾಡಿದ್ದೀರ. ನಿಮ್ಮ ಕಡತಗಳನ್ನು, ಹಗರಣಗಳನ್ನು ತೆಗೆಯಬೇಕಾ?” ಅಂತಹ ಮಾತಿಗೆ ವಿರುದ್ಧವಾಗಿ ನೈತಿಕವಾಗಿ ಬಲವಾದ ವಾದವೊಂದನ್ನು ಮುಂದೊಡ್ಡುವ ಸ್ಥಿತಿಯಲ್ಲಿ ಇವತ್ತಿನ ಕಾಂಗ್ರೆಸ್-ಜೆಡಿಎಸ್ ನಾಯಕತ್ವ ಇಲ್ಲ.

ಈ ಮೂರೂ ಗುಂಪುಗಳಿಗೆ ಹೊರತಾಗಿ ಅಂತಹ ಯಾವೊಂದು ಕೃತ್ಯದಲ್ಲೂ ಭಾಗಿಯಾಗದ, ಇಲ್ಲಿಯವರೆಗೂ ಆಡಳಿತ ಪಕ್ಷವಾಗದೆ ಇದ್ದ ಪಕ್ಷವೊಂದರ ಒಬ್ಬನೇ ಒಬ್ಬ ಶಾಸಕ ವಿಧಾನಸಭೆಯಲ್ಲಿಲ್ಲ. ಹಾಗೆಯೆ, ಯಾವುದೆ ಅಮಿಷಕ್ಕೊಳಗಾಗದೆ ನೈತಿಕ ರಾಜಕಾರಣ ನಡೆಸಿದಂತಹ, ಹಾಗೂ ಹಗರಣವೊಂದನ್ನು ತಾರ್ಕಿಕ ಮಟ್ಟಕ್ಕೆ ಒಯ್ಯಬಲ್ಲವರಾಗಿದ್ದ ಸ್ವತಂತ್ರ ಮನೋಭಾವದ ಪಕ್ಷೇತರರೂ ಈ ಸಲ ಆರಿಸಿಬಂದಿಲ್ಲ. ಹೆಸರಿಗೆ ಮೂರು ಪಕ್ಷಗಳಾದರೂ ಎಲ್ಲರದೂ ಒಂದೇ ಗುಂಪು. ಅದೇ ಮನಸ್ಥಿತಿ. ಇಂತಹ ಸ್ಥಿತಿಯಲ್ಲಿ ಎಂತಹ ದೊಡ್ಡ ಹಗರಣ ಬಯಲಿಗೆ ಬಂದರೂ ಆಡಳಿತ ಪಕ್ಷದವರು ವಿರೋಧ ಪಕ್ಷಗಳ ಹಿಂದಿನ ಕೃತ್ಯಗಳನ್ನು ಮುಂದೊಡ್ಡಿ ಚರ್ಚೆಯನ್ನು ಮತ್ತು ತನಿಖೆಯನ್ನು ನಿಲ್ಲಿಸುತ್ತಿದ್ದಾರೆ ಮತ್ತು ಅವರ ಬಾಯಿ ಕಟ್ಟುತ್ತಿದ್ದಾರೆ. ಕರ್ನಾಟಕದ ರಾಜಕೀಯ ಮತ್ತು ಅದು ಸೃಷ್ಟಿಸುತ್ತಿರುವ ಹೊಸ ಸಾಮಾಜಿಕ ಮೌಲ್ಯಗಳು ಘನಘೋರ ಘಟ್ಟದಲ್ಲಿ ಬಂದು ನಿಂತಿದೆ.

Reader Comments

Add a Comment

required, use real name
required, will not be published
optional, your blog address