ಸೆಕೆಂಡ್ ಹ್ಯಾಂಡ್ ಹಡಗಿಗೆ ಕೈಯ್ಯೊಡ್ಡಿ ನಿಂತ ಭಾರತ!!!

This post was written by admin on January 21, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 2, 2007 ರ ಸಂಚಿಕೆಯಲ್ಲಿನ ಲೇಖನ)

ಕಳೆದ ವಾರ ನಡೆದ ಎರಡು ಘಟನೆಗಳು ಭಾರತದ ಮಿಲಿಟರಿ ಅಸಾಮರ್ಥ್ಯಕ್ಕೆ ಹಿಡಿದ ಎರಡು ಜ್ವಲಂತ ನಿದರ್ಶನಗಳು. ಇಲ್ಲಿ ಮಿಲಿಟರಿ ಅಸಾಮರ್ಥ್ಯ ಎಂದರೆ ಅದನ್ನು ನಮ್ಮ ಸೈನಿಕರ ಅಸಾಮರ್ಥ್ಯ ಎಂದು ಭಾವಿಸಬಾರದು. ಯಾಕೆಂದರೆ, ಅಂತಿಮವಾಗಿ ಮಿಲಿಟರಿಗೆ ಏನು ಬೇಕು, ಏನು ಬೇಡ ಎನ್ನುವುದನ್ನು ತೀರ್ಮಾನಿಸುವವರು ರಾಜಕಾರಣಿಗಳು, ಅಧಿಕಾರಿಗಳು. ಹಾಗಾಗಿ ಇದು ಸಂಪೂರ್ಣವಾಗಿ ನಮ್ಮ ದೇಶದ ಆಡಳಿತಗಾರರ ದೂರದೃಷ್ಟಿಗೆ, ಕನಸಿಗೆ, ಕೆಚ್ಚಿಗೆ, ಇಚ್ಚಾಶಕ್ತಿಗೆ ಸಂಬಂಧಿಸಿದ್ದು.

ಇಂದು ಬಹುಶಃ ಸಾವಿರಾರು ಕೃತಕ ಉಪಗ್ರಹಗಳು ಭೂಮಿಯ ಮೇಲೆ ಅಂತರಿಕ್ಷದಲ್ಲಿವೆ. ಕೆಲವು ಭೂಮಿಯನ್ನು ನಾನಾ ತರಹ, ನಾನಾ ಸಲ ಸುತ್ತುವ ಉಪಗ್ರಹಗಳಾದರೆ, ಇನ್ನು ಕೆಲವು ಒಂದೇ ಸ್ಥಳದಲ್ಲಿ ಇರುವಂತೆ ಕಾಣಿಸುವ ಜಿಯೊಸ್ಟೇಷನರಿ ಉಪಗ್ರಹಗಳು. (ಆದರೆ ಅವೂ ಸಹ ಭೂಮಿಯನ್ನು ದಿನಕ್ಕೊಂದು ಬಾರಿ ಸುತ್ತುತ್ತವೆ.) ಅಂತರರಾಷ್ಟ್ರ್ರೀಯ ಬಾಹ್ಯಾಕೇಶ ಕೇಂದ್ರ ಸಹ ಒಂದು ರೀತಿಯ ಉಪಗ್ರಹವೆ. ಅದು ಎಷ್ಟು ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದೆ ಎಂದರೆ, ಡಿಸೆಂಬರ್ ತಿಂಗಳಿನಲ್ಲಿ ಆ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್, 2007 ರ ಹೊಸ ವರ್ಷವನ್ನು 16 ಬಾರಿ ಆಚರಿಸಿದರು. ಹೇಗೆಂದರೆ ಆ ಬಾಹ್ಯಾಕೇಶ ಕೇಂದ್ರ 24 ಘಂಟೆಗಳಲ್ಲಿ 16 ಸಲ ಭೂಮಿಯನ್ನು ಸುತ್ತುತ್ತದೆ!

ಉಪಗ್ರಹಗಳನ್ನು ನಾಗರೀಕ ಮತ್ತು ಮಿಲಿಟರಿ ಉದ್ದೇಶಗಳೆರಡಕ್ಕೂ ಬಳಸಲಾಗುತ್ತದೆ. ಭಾರತದ ಬಹಳಷ್ಟು ಉಪಗ್ರಹಗಳು ನಾಗರೀಕ ಉದ್ದೇಶಕ್ಕೆ ಬಳಸುವ ಕಮ್ಯುನಿಕೇಶನ್ ಉಪಗ್ರಹಗಳು. ಅವುಗಳ ಉಪಯೋಗ ಟಿವಿ, ರೇಡಿಯೋ, ಟೆಲಿಫೋನ್, ಇತ್ಯಾದಿಗಳ ಸಿಗ್ನಲ್‌ಗಳನ್ನು ಪ್ರಸಾರ ಮಾಡವುದು. ಒಂದು ದೇಶ, ಭೂಭಾಗದ ಮೇಲೆ ಕ್ಯಾಮೆರಾ ಕಣ್ಣಿಟ್ಟು ಗೂಢಚಾರಿಕೆ ನಡೆಸುವ ಮಿಲಿಟರಿ ಉಪಗ್ರಹಗಳೂ ಕಮ್ಯುನಿಕೇಶನ್ ಉಪಗ್ರಹಗಳೆ. ಇನ್ನು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಉಪಗ್ರಹಗಳಿಂದ ಪಡೆವ ಮಾಹಿತಿಯನ್ನು ಮುಂದುವರಿದ ದೇಶಗಳಲ್ಲಿ ಸಾಮಾನ್ಯ ಕಾರು ಚಾಲಕರೂ ಸಹ ರೋಡ್ ಡೈರೆಕ್ಷನ್ಸ್‌ಗೆ ಉಪಯೋಗಿಸುತ್ತಾರೆ. ಹಾಗೆಯೆ ಮಿಲಿಟರಿಯವರು ಸದ್ದಾಮ್ ಹುಸೇನ್ ಯಾವ ಮನೆಯಲ್ಲಿ ಅಡಗಿ ಕುಳಿತಿದ್ದಾನೆ, ಕ್ಷಿಪಣಿಗೆ ಯಾವ ಮಾಹಿತಿ ನೀಡಿದರೆ ಅದು ಹೋಗಿ ಅದೇ ಮನೆಯ ಮೇಲೆ ಬಾಂಬ್ ಹಾಕುತ್ತದೆ ಎಂದು ಲೆಕ್ಕ ಹಾಕಲೂ ಬಳಸುತ್ತಾರೆ.

ಈ ಉಪಗ್ರಹಗಳಿಗೂ ಆಯಸ್ಸು ಇರುತ್ತದೆ. ಐದಾರು ವರ್ಷಗಳ ನಂತರ ಅವುಗಳಲ್ಲಿ ಬಹಳವು ಉಪಯೋಗಕ್ಕೆ ಬರುವುದಿಲ್ಲ. ಈ ವಿಜ್ಞಾನ ಕೆಲವೊಮ್ಮೆ ಯಾವ ವೇಗದಲ್ಲಿ ಮುಂದುವರೆಯುತ್ತದೆ ಎಂದರೆ, ನಾಲ್ಕೈದು ವರ್ಷಗಳ ಹಿಂದೆ ಉಪಯುಕ್ತ ಮಾಹಿತಿ ಎನ್ನಿಸುತ್ತಿದ್ದ ಮಾಹಿತಿ ಇಂದು ಓಬೀರಾಯನ ಕಾಲದ ಮಾಹಿತಿ ಎನ್ನಿಸಿಕೊಳ್ಳುತ್ತದೆ. ಈ ಆಯಸ್ಸು ಮುಗಿದ ಉಪಗ್ರಹಗಳು ಯಾರಿಗೂ ಯಾವುದೇ ಅಪಾಯ ಮಾಡದೆ, ತಮ್ಮ ಕಕ್ಷೆಯಲ್ಲಿ ಅನಂತ ಕಾಲ ಸುತ್ತುತ್ತವೆ ಅಷ್ಟೆ.

ಭೂಮಿಯಿಂದ 865 ಕಿ.ಮೀ. ದೂರದಲ್ಲಿ ಇಂತಹ ಆಯಸ್ಸು ಮುಗಿದಿದ್ದ ತನ್ನದೆ ಉಪಗ್ರಹವೊಂದನ್ನು ಇದೇ ಜನವರಿ 11 ರಂದು ಚೀನಾ ದೇಶ ಕ್ಷಿಪಣಿ ಉಡಾಯಿಸಿ ನುಚ್ಚುನೂರು ಮಾಡಿತು. ಚೀನಾ ಇದನ್ನು ಎಲ್ಲಿಯೂ ಹೇಳದಿದ್ದರೂ ಬಾಹ್ಯಾಕಾಶದ ಮೇಲೆ ನಿರಂತರ ಕಣ್ಣಿಟ್ಟಿರುವ ಅಮೇರಿಕಕ್ಕೆ ಇದು ಗೊತ್ತಾಗಿ ಅದಕ್ಕೆ ಶಾಕ್ ಆಯಿತು. ಯಾಕೆಂದರೆ, ಹೀಗೆ ಅಂತರಿಕ್ಷದಲ್ಲಿನ ಉಪಗ್ರಹಗಳನ್ನು ನಾಶ ಪಡಿಸುವ ತಾಕತ್ತು ಇಲ್ಲಿಯತನಕ ಇದ್ದದ್ದು ಅಮೇರಿಕ ಮತ್ತು ರಷ್ಯಾಕ್ಕೆ ಮಾತ್ರ. ಈಗ ಅದು ಚೀನಾ ದೇಶಕ್ಕೂ ಇದೆ ಎಂದು ಸಾಬೀತಾಯಿತು.

ಇಂದು ಅಮೇರಿಕ ತಾನು ನಡೆಸುವ ಪ್ರತಿಯೊಂದು ಯುದ್ಧ ಕಾರ್ಯಾಚರಣೆಗೂ ಉಪಗ್ರಹಗಳನ್ನು ಅವಲಂಬಿಸಿದೆ. ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ, ಮೇಲೆ ಸೂರಿರದ ಬಯಲಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತನ್ನ ಉಪಗ್ರಹಗಳ ಮೂಲಕ ಅಮೇರಿಕ ನೋಡುತ್ತದೆ. ತನಗೆ ಬೇಕಾದ ಟೆರ್ರರಿಸ್ಟ್‌ಗಳು ಅಡಗಿ ಕುಳಿತಿರುವ ಜಾಗದ ಮಾಹಿತಿ ತಿಳಿದರೆ ಸಾಕು, ಆ ಜಾಗಕ್ಕೆ ಹತ್ತಿರ ಇರಬಹುದಾದ ತನ್ನ ಹಡಗಿನಿಂದ ಕೂಡಲೆ ಉಪಗ್ರಹಗಳ ನೆರವಿನಿಂದ ಕ್ಷಿಪಣಿ ಉಡಾಯಿಸುತ್ತದೆ. ತನ್ನ ಸೈನಿಕರು ಹೋಗುವುದಕ್ಕಿಂತ ಮುಂಚೆಯೆ, ವಿಮಾನಗಳನ್ನೂ ಸಹ ಕಳುಹಿಸದೆ, ಸಾವಿರಾರು ಮೈಲಿ ದೂರದಲ್ಲಿರುವ ತನ್ನ ಹಡಗಿನಿಂದ ಕ್ಷಿಪಣಿಗಳನ್ನು ಕರಾರುವಾಕ್ಕಾಗಿ ಕಳುಹಿಸಿ ಆ ಸ್ಥಳವನ್ನೆಲ್ಲ ಬುಡಮೇಲು ಮಾಡುವ ತಾಕತ್ತು ಇವತ್ತು ಅಮೇರಿಕಕ್ಕಿದೆ. ಅಫ್ಘಾನಿಸ್ತಾನ್ ಮತ್ತು ಇರಾಕಿನಲ್ಲಿ ನಡೆಯುತ್ತಿರುವ ಗೆರಿಲ್ಲಾ ಮಾದರಿಯ ಯುದ್ದದಲ್ಲಿ ಅಮೇರಿಕದ ಸೈನಿಕರ ಸಾವಿನ ಪ್ರಮಾಣ ಕಡಿಮೆಯಿದ್ದರೆ ಅದಕ್ಕೆ ಮುಖ್ಯ ಕಾರಣ ಅವರ ಉಪಗ್ರಹಾಧಾರಿತ ಆಧುನಿಕ ತಂತ್ರಜ್ಞಾನ.

ಈಗ ಅಂತಹ ಉಪಗ್ರಹಗಳನ್ನೆಲ್ಲ ಚೈನಾ ಮನಸ್ಸು ಮಾಡಿದರೆ ನುಚ್ಚುನೂರು ಮಾಡಬಲ್ಲದು ಎನ್ನುವುದೆ ಅಮೇರಿಕದ ಆಕ್ಷೇಪಣೆಗೆ ಮುಖ್ಯ ಕಾರಣ. ಈ ಘಟನೆ ಅಮೇರಿಕಕ್ಕೇ ಗಾಬರಿ ಉಂಟುಮಾಡಿದೆ ಎನ್ನಬಹುದಾದರೆ, ಚೀನಾದವರು ನಮಗಿಂತ ಮಿಲಿಟರಿಯಲ್ಲಿ ಎಷ್ಟು ಮುಂದಿದ್ದಾರೆ ಎನ್ನುವುದನ್ನು ನಾವು ಸುಲಭವಾಗಿ ಊಹಿಸಬಹುದು.

ಚೀನಾ ಹೀಗೆ ಸದ್ದಿಲ್ಲದ್ದೆ ಆಕಾಶದಲ್ಲಿ ದೀಪಾವಳಿ ಆಚರಿಸುತ್ತಿದ್ದರೆ, ಭಾರತ 39 ವರ್ಷಗಳಷ್ಟು ಹಳೆಯದಾದ ಸೆಕೆಂಡ್ ಹ್ಯಾಂಡ್ ಮಿಲಿಟರಿ ಹಡಗನ್ನು ಕಳೆದ ವಾರವಷ್ಟೆ ಅಮೇರಿಕಾದಿಂದ ಕೊಂಡುಕೊಂಡು ಹೆಮ್ಮೆಯಿಂದ ಬೀಗುತ್ತಿತ್ತು! 1968 ರಲ್ಲಿಯೆ ಅಮೇರಿಕದ ನೌಕಾದಳ ಸೇರಿದ USS Trenton ಎಂಬ ಈ ಹಡಗನ್ನು ಭಾರತ ಸರ್ಕಾರ 218 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಆ ಹಡಗು ನಾವು ನಮಗಿಂತ ಮಿಲಿಟರಿಯಲ್ಲಿ ಅನೇಕ ಪಟ್ಟು ಬಲಿಷ್ಠರಾದ ಚೀನಾದವರ ಮೇಲೆ ಯುದ್ಧ ಮಾಡುವಾಗ ಹೆಚ್ಚು ಉಪಯೋಗಕ್ಕೆ ಬರದಿದ್ದರೂ ನಮಗಿಂತ ಕನಿಷ್ಠರಾದ ಪಾಕಿಸ್ತಾನದ ಮೇಲೆ ಖಂಡಿತ ಉಪಯೋಗಕ್ಕೆ ಬರುತ್ತದೆ! ಹಾಗಾಗಿ ಅದರ ಉಪಯೋಗದ ಬಗ್ಗೆ ಎರಡನೇ ಪ್ರಶ್ನೆಯಿಲ್ಲ. ಆದರೆ ಇಲ್ಲಿನ ದುರಂತ ಏನೆಂದರೆ, ನಮ್ಮ ಸೈನಿಕರಿಗೆ ಅಮೇರಿಕ 40 ವರ್ಷಗಳ ಹಿಂದೆ ತಯಾರಿಸಿದಂತಹ ಹಡಗನ್ನು ನಾವೇ ತಯಾರಿಸಿ ನೀಡಲು ನಮಗೆ ಇಲ್ಲಿಯತನಕವೂ ಸಾಧ್ಯವಾಗಿಲ್ಲ ಎನ್ನುವುದು.

ಅಸಮರ್ಥ ನಾಯಕರು, ದೇಶಪ್ರೇಮವಿಲ್ಲದ ಅಧಿಕಾರಶಾಹಿ, ಪಲಾಯನವಾದವನ್ನೆ ವೇದಾಂತ, ಮುಕ್ತಿಗೆ ದಾರಿ ಎಂದು ಬೋಧಿಸುತ್ತ ಬಂದ ಮತಾಂಧರು, ಸ್ವಾಭಿಮಾನ ಮತ್ತು ಪೌರಪ್ರಜ್ಞೆ ಇಲ್ಲದ ಜನರ ಅಡಿಯಲ್ಲಿ ಅನೇಕ ವರ್ಷಗಳ ಕಾಲ ಬಿದ್ದು ನರಳಿದ ಕಾರಣಕ್ಕೆ ಇವತ್ತಿಗೂ ನಮ್ಮ ಭವ್ಯ ಭಾರತ ಕೇವಲ ಬೆಂಗಳೂರಿನಷ್ಟು ಜನಸಂಖ್ಯೆಯಿರುವ, ನಮ್ಮ ಗುಲ್ಬರ್ಗ ಜಿಲ್ಲೆಯಷ್ಟು ಮಾತ್ರವೆ ಭೂವಿಸ್ತಾರವಿರುವ ಇಸ್ರೇಲ್ ದೇಶದಿಂದ ವರ್ಷಕ್ಕೆ 7000 ಕೋಟಿ ರೂಪಾಯಿಗಳಷ್ಟು ಮಿಲಿಟರಿ ಆಯುಧಗಳನ್ನು ಆಮದು ಮಾಡಿಕೊಳ್ಳುತ್ತಿದೆ! ಇಂತಹ ಅಸಹಾಯಕತೆಯ ಬಗ್ಗೆ ಯೋಚಿಸದ ಜನಕ್ಕೆ ಸದ್ಯದ ಬರ್ನಿಂಗ್ ಇಷ್ಯೂಸ್ ಏನೆಂದರೆ ಸದ್ದಾಮ್‌ಗೆ ನೇಣು ಆಗಿದ್ದು, ವಿರಾಟ್ ಶಕ್ತಿಪ್ರದರ್ಶನ ಮಾಡುವುದು, ಮೊಟ್ಟೆಯನ್ನು ನಿಷೇಧಿಸುವುದು! ಧರ್ಮಭೀರುಗಳ ಮಾತು ಕೇಳಿಕೊಂಡು ಸೈನ್ಯದಲ್ಲಿ ಮೊಟ್ಟೆ, ಮಾಂಸಾಹಾರ ನಿಷೇಧಿಸಿಲ್ಲ ಎನ್ನುವುದೊಂದೆ ಸದ್ಯದ ಸಮಾಧಾನ!!! ಪಕ್ಕದ ಮತಾಂಧ ಪಾಕಿಸ್ತಾನದ ಭಯವಿಲ್ಲದೆ ಹೋಗಿದ್ದರೆ ನಮ್ಮ ಧರ್ಮಗುರುಗಳು, ಅಡ್ವಾಣಿ ಸಾಹೇಬರು ಅಲ್ಲಿಯೂ ಬಾಲವಾಡಿಸಿ, ಸೈನಿಕರಿಗೆ ಲಾಠಿ ಮಾತ್ರ ಕೊಟ್ಟು ಬಾಳೆಹಣ್ಣಿನ ರಸಾಯನವನ್ನು ಪಥ್ಯ ಮಾಡಿಬಿಡುತ್ತಿದ್ದರು!

Reader Comments

This is very bad our politiastion in india.

#1 
Written By S T B venkatesh on November 23rd, 2010 @ 3:46 am

Add a Comment

required, use real name
required, will not be published
optional, your blog address