ಬರೀ ಒಂದಿಬ್ಬರು ಸ್ಟಾರ್‌ಗಳನ್ನಷ್ಟೆ ಅಲ್ಲ, ಭಾರತವನ್ನೂ ಬೆಳೆಸಬೇಕಿರುವ ಕ್ರಿಕೆಟ್…

This post was written by admin on January 24, 2008
Posted Under: Uncategorized

(ವಿಕ್ರಾಂತ ಕರ್ನಾಟಕ – ಫೆಬ್ರವರಿ 1, 2008 ರ ಸಂಚಿಕೆಯಲ್ಲಿನ ಬರಹ)

ಕೋಟ್ಯಾಂತರ ಜನ ಕನ್ನಡಿಗರಿಗೆ ಎನ್ನಲಾಗದಿದ್ದರೂ ಒಂದಷ್ಟು ಲಕ್ಷ ಕನ್ನಡಿಗರಿಗೆ ಪರಿಚಯ ಇರುವವರು ಅವರು. ಹತ್ತಾರು, ಬಹುಶಃ ನೂರಾರು ಕೋಟಿಗಳ ಆಸ್ತಿಯನ್ನೂ ಮಾಡಿದ್ದಾರೆ. ಚೆನ್ನಾಗಿ ಓದಿಕೊಂಡಿದ್ದಾರೆ. ಕೆಲವೊಂದು ಸಾಮಾಜಿಕ ಕಾಳಜಿಗಳೂ ಇದ್ದಂತಿವೆ. ಇದೇ ಕಾರಣಕ್ಕೆ ಅವರನ್ನು ನಾನು ಸುಮಾರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ. ಅವರಿಗೂ ಕ್ರೀಡೆಗಳ ಬಗ್ಗೆ ಆಸಕ್ತ್ತಿಯಿತ್ತು. ಹಾಗಾಗಿಯೆ ಅಂದು ಭಾರತದ Pathetic State of Sports ಬಗ್ಗೆ ವಿಷಯ ಬಂತು. ಆ ಮಾತುಕತೆಗೆ ನನಗೆ ಹಿನ್ನೆಲೆಯಾಗಿದ್ದದ್ದು ನಾನು 2003 ನವೆಂಬರ್‌ನಲ್ಲಿ ಬರೆದಿದ್ದ ಒಂದು ಲೇಖನ.

ಅಮೆರಿಕಾದಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಫುಟ್‌ಬಾಲ್ (ಸಾಕರ್) ಕ್ರೀಡೆಯಲ್ಲಿ ಆಗ ತಾನೆ, ಅಂದರೆ 2003ರಲ್ಲಿ, ಒಬ್ಬ ಕಪ್ಪು ಹುಡುಗ ಆಡಲು ಆರಂಭಿಸಿದ್ದ. ಆತನ ಹೆಸರು ಫ್ರೆಡ್ಡಿ ಅಡು. ತನ್ನ ಎಂಟನೆ ವಯಸ್ಸಿನಲ್ಲಿ ಆಫ್ರಿಕಾ ಖಂಡದ ಘಾನಾ ದೇಶದಿಂದ ಅಮೆರಿಕಕ್ಕೆ ವಲಸೆ ಬಂದವ ಅವ. ಅಮೆರಿಕದವರು ಕೆಲವು ದೇಶಗಳಲ್ಲಿ ವಲಸೆ ಲಾಟರಿ ನಡೆಸುತ್ತಾರೆ. ಹಾಗೆ ಲಾಟರಿ ಹೊಡೆದವರಿಗೆ ತಮ್ಮ ದೇಶಕ್ಕೆ ವಲಸೆ ಬರಲು ಅನುಮತಿ ಕೊಡುತ್ತಾರೆ. ಅಂತಹುದೊಂದು ಲಾಟರಿಯಲ್ಲಿ ಅಡುವಿನ ಅಮ್ಮನಿಗೆ ಲಾಟರಿ ಹೊಡೆದಿತ್ತು. ಹಾಗೆ ಅಮೆರಿಕಕ್ಕೆ ಬಂದವನು ಅವನು. ಸೋಜಿಗ ಏನೆಂದರೆ, ಹಾಗೆ ಬಂದ ಆರು ವರ್ಷಕ್ಕೆಲ್ಲ, ಅಂದರೆ ತನ್ನ ಹದಿನಾಲ್ಕನೆ ವಯಸ್ಸಿಗೆಲ್ಲ ಆತ ಅಮೇರಿಕದಲ್ಲಿ ಜನಪ್ರಿಯ ಸಾಕರ್ ಆಟಗಾರನಾಗಿಬಿಟ್ಟ. ಆಗ ಆತನ ವ್ಯಕ್ತಿಚಿತ್ರ ಬರೆಯುತ್ತ ನಾನು ಆಗಿನ ಭಾರತದ ಕ್ರೀಡಾಸ್ಥಿತಿಯನ್ನು ಹೀಗೆ ವಿಮರ್ಶಿಸಿದ್ದೆ:

“ನವೆಂಬರ್ 19, 2003 ರ ಹೊಸ ಪಟ್ಟಿಯ ಪ್ರಕಾರ ವಿಶ್ವ ಫುಟ್ಬಾಲ್‌ನಲ್ಲಿ ಭಾರತದ ಸ್ಥಾನ 204 ಸ್ಥಾನಗಳಲ್ಲಿ 128 ನೆಯದು. ಅಮೇರಿಕೆಯಂತಹ ದೇಶ ಲಾಟರಿಯೋ ಮತ್ತೊಂದೋ ನೀಡಿ, ತಿಳಿದೋ, ತಿಳಿಯದೆಯೋ ಎಲ್ಲಾ ರಂಗಗಳಲ್ಲಿಯೂ ಪ್ರಪಂಚದಲ್ಲಿನ ಶ್ರೇಷ್ಠರನ್ನು ತನ್ನತ್ತ ಸೆಳೆಯುತ್ತಿದೆ. ನಾವು ಕ್ರಿಕೆಟ್ ಎಂಬ ಒಂದೇ ಆಟದಲ್ಲಿ ದೇಶದ ಚೈತನ್ಯ ಮತ್ತು ಆಶಾವಾದವನ್ನು ಅರಸುತ್ತ ಸಾಗುತ್ತಿದ್ದೇವೆ. ಒಬ್ಬ ಕಪಿಲ್ ದೇವ್‌ಗೆ, ಒಬ್ಬ ಗಾಂಧಿಗೆ, ಒಬ್ಬ ಠಾಗೂರ್‌ಗೆ, ಒಬ್ಬ ರಾಮನ್‌ಗೆ, ಒಬ್ಬ ಟಾಟಾಗೆ, ಒಬ್ಬ ಧ್ಯಾನ್ ಸಿಂಗ್‌ಗೆ ತೃಪ್ತಿಪಟ್ಟುಕೊಳ್ಳುತ್ತ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ನೆರೆಮನೆಯವನ ಎರಡೂ ಕಣ್ಣು ಹೋಗಲಿ ಎಂಬ ವಿಲಕ್ಷಣ ತೃಪ್ತಿಯಲ್ಲಿದ್ದೇವೆ. ನಮಗೆ ಬೇಕಾಗಿರುವುದು ಒಬ್ಬಿಬ್ಬರಲ್ಲ, ಬದಲಿಗೆ ಪ್ರತಿ ರಂಗದಲ್ಲಿಯೂ ಸಾವಿರಾರು ಗಾಂಧಿ-ರಾಮನ್-ಮೂರ್ತಿ-ಠಾಗೂರ್-ಧ್ಯಾನ್‍‍ಗಳು ಎಂದು ತಿಳಿದುಕೊಳ್ಳದೆ ಹೋಗುತ್ತಿದ್ದೇವೆ.

“ಆದರ್ಶಗಳನ್ನು ಸಿನೆಮಾಗಳಲ್ಲಿಯೂ, ನಾಯಕತ್ವವನ್ನು ನಟರಲ್ಲಿಯೂ, ತೃಪ್ತಿಯನ್ನು ಕ್ರಿಕೆಟ್‌ನಲ್ಲಿಯೂ ಕಾಣುತ್ತ ಮೂಲಭೂತ ಸಮಸ್ಯೆಗಳಿಗೆ ಒತ್ತು ನೀಡದೆ ಮೂಲಭೂತವಾದ ಬೆಳೆಸುತ್ತ ವೈಜ್ಞಾನಿಕತೆಯಿಲ್ಲದೆ ಧರ್ಮ ಕರ್ಮಗಳಲ್ಲಿ ಮುಳುಗೇಳುತ್ತಿದ್ದೇವೆ. ಬೆಂಗಳೂರಿನ ಸುಸಜ್ಜಿತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವರ್ಷಕ್ಕೊಂದು ಆಟ ಆಡಿಸುತ್ತ, ತಂಡವನ್ನು ದೇಶದಾಚೆ ಕಳುಹಿಸಿ ಇಲ್ಲಿನ ಜನರಿಗೆ ಟಿವಿ ನೋಡಿಸುತ್ತ, ಸ್ಥಳೀಯ ಪಂದ್ಯಗಳ ಕತ್ತು ಹಿಸುಕುತ್ತ, ಇಲ್ಲಿ ಆಡಿಸುವ ಒಂದು ಆಟ ಎಷ್ಟು ಉದ್ಯೋಗ, ನೆಮ್ಮದಿ, ಉಪಕಸುಬುಗಳನ್ನು ಸೃಷ್ಟಿಸುತ್ತದೆ ಎಂಬ ಪರಿವೆಯಿಲ್ಲದೆ ದೂರದೃಷ್ಟಿಯಿಲ್ಲದ ಜೋಭದ್ರಗೇಡಿಗಳಡಿಯಲ್ಲಿ ಕ್ರೀಡೆ, ದೇಶ ಹಿಂದುಳಿಯುತ್ತಿದೆ. ಅಮೇರಿಕೆಯಲ್ಲಿ 60 ವರ್ಷಗಳ ಹಿಂದೆ ಮಹಾ ಆರ್ಥಿಕ ಮುಗ್ಗಟ್ಟು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಜನತೆ Seabiscuit ಎಂಬ ರೇಸ್ ಕುದುರೆಯಲ್ಲಿ ತನ್ನ ಚೈತನ್ಯವನ್ನು ಕಂಡುಕೊಂಡಿತು. ಅಂತಹ ಮಾನಸಿಕ, ದೈಹಿಕ, ಆರ್ಥಿಕ ಚೈತನ್ಯ ಪ್ರತಿ ರಂಗದಲ್ಲಿಯೂ, ಕ್ರೀಡೆಯಲ್ಲಿಯೂ ಕಾಣೋಣ ಎಂದು ಆಶಿಸುತ್ತಾ, ಬಿಡದೆ ಪ್ರಯತ್ನಿಸುತ್ತಾ, ಕಲಿಯುತ್ತಾ…”

ಇದೇ ಹಿನ್ನೆಲೆಯಲ್ಲಿ ನಾನು ಸಾಮಾಜಿಕ ಕಾಳಜಿ ಇದ್ದ ಆ ಶ್ರೀಮಂತ ಕನ್ನಡಿಗರಿಗೆ ಹೇಳಿದೆ: “ಅಲ್ಲ ಸಾರ್, ಯಾಕೆ ನೀವು ಎರಡು-ಮೂರು ಗಂಟೆಗಳ, 20-25 ಓವರ್‌ಗಳ ಕ್ರಿಕೆಟ್ ಆಟವನ್ನು ಇಲ್ಲಿ ಬೆಂಗಳೂರಿನಲ್ಲಿ ಆಡಿಸಲು ಪ್ರಯತ್ನಿಸಬಾರದು. ಅಮೆರಿಕಾದಲ್ಲಿ 3-4 ಲಕ್ಷ ಜನಸಂಖ್ಯೆ ಇರುವ ಪ್ರತಿ ನಗರವೂ ಬೇಸ್‌ಬಾಲ್, ಅಮೆರಿಕನ್ ಫುಟ್‌ಬಾಲ್, ಐಸ್‌ಹಾಕಿ, ಬ್ಯಾಸ್ಕೆಟ್‌ಬಾಲ್ ಆಟಗಳ ತನ್ನದೇ ಆದ ಯಾವುದಾದರೂ ಒಂದು ತಂಡವನ್ನಾದರೂ ಹೊಂದಿದ್ದು, ತಮ್ಮ ನಗರದ ಸುಸಜ್ಜಿತ ಸ್ಟೇಡಿಯಮ್‌ಗಳಲ್ಲಿ ಬೇರೆ ನಗರದ ತಂಡಗಳೊಡನೆ ಆಡುತ್ತವೆ. ಪ್ರತಿ ಆಟಕ್ಕೂ ಆಟ ನೋಡಲು 10-20 ಸಾವಿರದಿಂದ ಹಿಡಿದು, 50-60 ಸಾವಿರದ ತನಕ ಕ್ರೀಡಾಪ್ರೇಮಿಗಳು ಬರುತ್ತಾರೆ. ಅದೇ ಒಂದು ಪರ್ಯಾಯ ಎಕಾನಮಿ. ನೂರಾರು ಜನರಿಗೆ ಅದರಿಂದ ಉದ್ಯೋಗ ದೊರೆಯುತ್ತದೆ. ಅನೇಕ ಲೋಕಲ್ ಸ್ಟಾರ್‌ಗಳು ಹುಟ್ಟಿಕೊಳ್ಳುತ್ತಾರೆ. ಸಾಯಂಕಾಲದ ಹೊತ್ತು ಇರುವುದರಿಂದ ಯಾರೂ ಕೆಲಸ ಬಿಟ್ಟು ಆಟ ನೋಡಲು ಬರುವ ಅಗತ್ಯ ಇಲ್ಲ. ಆ ನಗರದ ಲೋಕಲ್ ಟಿವಿಯವರು ಲೈವ್ ಆಟ ತೋರಿಸುತ್ತಾರೆ. ಜನರಿಗೂ ಮನರಂಜನೆ, ಸ್ಥಳೀಯರಿಗೆ ದ್ಯೋಗ, ಒಂದಷ್ಟು ಸ್ಥಳೀಯ ಸ್ಟಾರ್‌ಗಳ ಜನನ. ಇದನ್ನೆ ನೀವೂ ಯಾಕೆ ಇಲ್ಲಿ ಪ್ರಯತ್ನಿಸಬಾರದು? ಅದಕ್ಕೆ ದುಡ್ಡೇನೂ ಜಾಸ್ತಿ ಬೇಕಾಗಿಲ್ಲ. ಆದರೆ, ನಮ್ಮಲ್ಲಿ ಒಂದೆರಡು ಟೀಮ್ ಕಟ್ಟೋದಿಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ. ಒಳ್ಳೆ ಕಾಂಟ್ಯಾಕ್ಟ್ಸ್ ಇರೊ ನಿಮ್ಮಂತಹವರು ಇದನ್ನು ಖಂಡಿತ ಸಾಧ್ಯ ಮಾಡಬಹುದು,” ಎಂದೆ.

ನಾನು ಈ ಮಾತು ಹೇಳಿ ಮುಗಿಸಿದ್ದೆ, ಸ್ವತಃ ಕನಸುಗಳಿರುವ ಅವರು ಒಂದು ಕ್ಷಣವೂ ಯೋಚಿಸದೆ, “ಅವೆಲ್ಲ ಇಲ್ಲಿ ಆಗಲ್ರಿ” ಎಂದುಬಿಟ್ಟರು!

***
ಕಳೆದ ವಾರ ತಾನೆ ಆಸ್ಟ್ರೇಲಿಯದಲ್ಲಿನ ತನ್ನ ಮೂರನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಗೆದ್ದಿದೆ. ಮೊದಲ ಎರಡು ಮ್ಯಾಚ್‌ಗಳನ್ನು ಸೋತಿದ್ದಕ್ಕೆ (ಅದು ಯಾವ ರೀತಿಯಲ್ಲಾದರೂ ಆಗಿರಲಿ) ತಮ್ಮ ಆತ್ಮವಿಶ್ವಾಸವನ್ನೆ ಕಳೆದುಕೊಂಡುಬಿಟ್ಟಿದ್ದ ದೇಶದ ಒಂದಷ್ಟು ಕ್ರಿಕೆಟ್ ಹುಚ್ಚಿನ ಜನ ಈಗ ಮತ್ತೆ ಶ್ವಾಸಕೋಶದಲ್ಲಿ ಗಾಳಿ ತುಂಬಿಸಿಕೊಂಡು, ಅದನ್ನೆ ಎದೆಯುಬ್ಬಿಕೊಂಡಂತೆ ತೋರಿಸುತ್ತ ಓಡಾಡುತ್ತಿದ್ದಾರೆ. ಈ ಐದು ದಿನಗಳ ಟೆಸ್ಟ್ (ಪರೀಕ್ಷಿಸುವ) ಕ್ರಿಕೆಟ್ ಯಾವ ಸಮಯದಲ್ಲಿ, ಯಾವ ಅಗತ್ಯಕ್ಕೆ ಹುಟ್ಟಿತೊ ಈಗಲೂ ಪ್ರಪಂಚದ ಏಳೆಂಟು ದೇಶಗಳ ಜನ ಈಗಿನ ಕಾಲಕ್ಕೆ ಅನಗತ್ಯವಾಗಿರುವ ಇದನ್ನು ಆಡುತ್ತಲೆ ಬರುತ್ತಿದ್ದಾರೆ. ಏಕದಿನಗಳ ಪಂದ್ಯ ಇದ್ದುದರಲ್ಲಿ ಕ್ರಿಕೆಟ್ ಈಗಲೂ ಪ್ರಸ್ತುತವಾಗಿರುವಂತೆ ನೋಡಿಕೊಂಡಿದೆ. ಆದರೆ, ನಮ್ಮ ದೇಶದಲ್ಲಿರುವ ಕ್ರಿಕೆಟ್‌ನ ಇವತ್ತಿನ ಸ್ವರೂಪ ಅನೇಕ ಕಾರಣಗಳಿಗೆ ಪ್ರತಿಗಾಮಿಯಾದದ್ದು, ವಿಚ್ಛಿದ್ರಕಾರಿಯಾದದ್ದು.

ಅನೇಕ ಸ್ತರದಲ್ಲಿ, ಅನೇಕ ವಿಧದಲ್ಲಿ ಅಪಾರ ಪ್ರಭಾವಶಾಲಿಯಾಗಿರುವ ಈ ಕ್ರಿಕೆಟ್ ಆಟ ಭಾರತದಲ್ಲಿ ದೇಶಕ್ಕೆ ಅನುಕೂಲವಾಗಿ ಬೆಳೆಯುತ್ತಿದೆಯಾ ಎಂದರೆ ಇಲ್ಲ ಅಂತಲೆ ಹೇಳಬೇಕು. ಭಾರತದ ಕ್ರಿಕೆಟ್ ಮಂಡಳಿ ಎಷ್ಟು Filthy Rich ಆಗಿದೆಯೊ ಅದು ನಡೆದುಕೊಳ್ಳುತ್ತಿರುವ ರೀತಿಯೂ, ಅದರ ಸಾರ್ವಜನಿಕ ಬದ್ಧತೆಯೂ ಅಷ್ಟೆ Filthy ಯಾಗಿದೆ. ಅದಕ್ಕೆ ಉದಾಹರಣೆಯಾಗಿ ಅದು ಕರ್ನಾಟಕದಲ್ಲಿ ಈವರೆಗೂ ತೋರಿಸಿರುವ ನಡವಳಿಕೆಯನ್ನೆ ತೆಗೆದುಕೊಳ್ಳೋಣ. ಆರೇಳು ವರ್ಷಗಳ ಹಿಂದೆ ಭಾರತದ ಕ್ರಿಕೆಟ್ ತಂಡದಲ್ಲಿ ಅರ್ಧಕ್ಕಿಂತ ಹೆಚ್ಚು ಆಟಗಾರರು ಕರ್ನಾಟಕದವರೆ ಆಗಿದ್ದರು. ಇಂತಹ ಕಾಂಟ್ರಿಬ್ಯೂಷನ್ ಮಾಡಿದ ರಾಜ್ಯಕ್ಕೆ ಭಾರತದ ಕ್ರಿಕೆಟ್ ಮಂಡಳಿ ಏನು ಮಾಡಿದೆ? ಮೈಸೂರಿನಲ್ಲಾಗಲಿ, ಹುಬ್ಬಳ್ಳಿಯಲ್ಲಾಗಲಿ ಒಂದು ಸ್ಟೇಡಿಯಮ್ ಕಟ್ಟಿಸಿದ್ದಾರಾ? ನಗರ-ನಗರಗಳ ಮಧ್ಯೆ ಆಟವಾಡಿಸಿ, ಹೊಸ ಪ್ರತಿಭೆಗಳ ಶೋಧನೆಗೆ ಪ್ರಯತ್ನಿಸಿದ್ದಾರಾ? ಇದು ಎಂತಹ ಬೇಜವಾಬ್ದಾರಿ, ಅಯೋಗ್ಯ ಸಂಸ್ಥೆ ಎಂದರೆ, ಇವತ್ತಿಗೂ ರಾಜ್ಯರಾಜ್ಯಗಳ ನಡುವೆ ಆಡುವ ರಣಜಿ ಕ್ರಿಕೆಟ್ ಮತ್ತದೇ ಐದು ದಿನಗಳ ಟೆಸ್ಟ್ ಕ್ರಿಕೆಟ್ . ರಾಜ್ಯಗಳ ನಡುವೆ ಏಕದಿನದ ಪಂದ್ಯಗಳೇ ನಡೆಯುವುದಿಲ್ಲ. ಆದರೂ ಈ ಮುಠ್ಠಾಳರು ಟೆಸ್ಟ್ ಕ್ರಿಕೆಟ್‌ಗೆಂದೇ ಒಂದು ತಂಡ, ಏಕದಿನ ಪಂದ್ಯಕ್ಕೆ ಒಂದು ತಂಡ, 20/20 ಪಂದ್ಯಕ್ಕೆ ಮತ್ತೊಂದು ತಂಡ ಆಯ್ಕೆ ಮಾಡುತ್ತಾರೆ. ಹೊಸ ಆಟಗಾರರನ್ನು ಮೂಲಭೂತವಾಗಿ ಆಯ್ಕೆ ಮಾಡುವುದು ಮಾತ್ರ ಐದು ದಿನಗಳ ರಣಜಿ ಕ್ರಿಕೆಟ್ ಆಟದಲ್ಲಿನ ಪ್ರದರ್ಶನದ ಆಧಾರದ ಮೇಲೆ! ಇಲ್ಲಿ ಇದಕ್ಕೆ ಇನ್ನೂ ಒಂದು ಆಯಾಮವಿದೆ. ಇವತ್ತು ನ್ಯಾಷನಲ್ ಟೀಮ್‌ಗೆ ಆಯ್ಕೆಯಾದವ ಮಾತ್ರ ಅದೃಷ್ಟವಂತ. ಮಿಕ್ಕವರು ಎಷ್ಟೇ ಒಳ್ಳೆಯ ಆಟಗಾರರಾಗಿದ್ದರೂ ಕ್ರಿಕೆಟ್ ಆಟದಿಂದಲೆ ಅವರ ಜೀವನೋಪಾಯ ಸಾಧ್ಯವಿಲ್ಲ. ಇಂತಹ ಜನಪ್ರಿಯ ಆಟದ ಆಟಗಾರರ Pathetic ಸ್ಥಿತಿ ಅಂದರೆ ಅದು ಇದೇ.

ಲೇಖನದ ವಿಡಿಯೊ ಪ್ರಸ್ತುತಿ

ಭಾರತಕ್ಕೆ ಸ್ವಾತಂತ್ರ್ಯ ಬಂದು, ನಂತರ ಪ್ರಜಾಪ್ರಭುತ್ವವೂ ಸ್ಥಾಪನೆಯಾಗಿ ದಕ್ಷಿಣ ಕರ್ನಾಟಕದ ಮೈಸೂರು ಸಂಸ್ಥಾನ ಬಚಾವಾಯಿತು. ಇಲ್ಲದಿದ್ದರೆ ಶ್ರೀಕಂಠದತ್ತ ಒಡೆಯರ್ ಎಂಬುವವರು ಮೈಸೂರಿನ ರಾಜರಾಗಿಬಿಡುತ್ತಿದ್ದರು. ಯಾವೊಂದು ಕನಸೂ, ಯೋಜನೆಯೂ ಇಲ್ಲದ ಇವರು (ಇದ್ದಿದ್ದರೆ ಮೈಸೂರಿನ ಲೋಕಸಭಾ ಕ್ಷೇತ್ರದ ಜನ ಇವರನ್ನು ಎರಡೆರಡು ಸಲ ಸೋಲಿಸುತ್ತಿರಲಿಲ್ಲ) ಈಗ ಕರ್ನಾಟಕ ಕ್ರಿಕೆಟ್ ಬೋರ್ಡಿನ ಅಧ್ಯಕ್ಷರು. ಇವರ ಕಾಲದಲ್ಲೂ ಕರ್ನಾಟಕದ ಕ್ರಿಕೆಟ್ ಒಂದು ಹೊಸ ತಿರುವು ತೆಗೆದುಕೊಳ್ಳುವುದು ಸಂಶಯ. ಇನ್ನು ಕೇಂದ್ರದಲ್ಲಿ ಪ್ರಭಾವಿ ಮಂತ್ರಿಯಾಗಿ, ಕೈತುಂಬ ಕೆಲಸ ಇರುವ, ಪ್ರತಿದಿನ ಪವರ್ ಪಾಲಿಟಿಕ್ಸ್‌ನಲ್ಲಿ ಗುದ್ದಾಡಬೇಕಿರುವ ಶರದ್ ಪವಾರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ. ಇಂತಹ ರಾಜಕಾರಣಿಗಳ, ಹೊಟ್ಟೆಕಿಚ್ಚಿನ ಸ್ವಕೇಂದ್ರಿತ, ಸ್ವಾರ್ಥಿ, ಮಾಜಿ ಕ್ರಿಕೆಟ್ ಆಟಗಾರರ ಕೈಯಲ್ಲಿ ಇವತ್ತು ಭಾರತದ ಕ್ರಿಕೆಟ್ ಇದೆ. ಇವರಾರಿಗೂ ದೇಶದ ಪ್ರಗತಿಗೆ ಪೂರಕವಾಗಿ ಭಾರತದ ಒಳಗೆ ಕ್ರಿಕೆಟ್ ಅನ್ನು ಬೆಳೆಸುವ ಯೋಚನೆಗಳಾಗಲಿ, ಯೋಜನೆಗಳಾಗಲಿ ಇದ್ದಂತಿಲ್ಲ. ದೇಶದ ಬಗ್ಗೆ ಪರಿವೆ ಇಲ್ಲದ ಶುದ್ಧ ದಡ್ಡರು, ಸ್ವಾರ್ಥಿಗಳು ಭಾರತದಲ್ಲಿ ಕ್ರಿಕೆಟ್ ಆಟವನ್ನು ನಿಯಂತ್ರಿಸುವ ಅಧಿಕಾರ ಸ್ಥಾನದಲ್ಲಿರುವ ಈ ಮುಠ್ಠಾಳ ಶ್ರೀಮಂತ ಜೋಕರ್‌ಗಳು.

ತೆರೆದಿರುವ ಬಾಗಿಲು

ಮೂರ್ನಾಲ್ಕು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲೂ ಅಂತಾರ್ರಾಷ್ಟ್ರೀಯ ಕ್ರಿಕೆಟ್ ಆಟ ನಡೆಯುತ್ತದೆ. ಸುಮಾರು ಅರವತ್ತು+ ಲಕ್ಷ ಜನಸಂಖ್ಯೆಯ ಬೆಂಗಳೂರಿನಲ್ಲಿ ನೂರಕ್ಕೆ ಒಬ್ಬರಿಗೂ ಸ್ಟೇಡಿಯಮ್‌ನಲ್ಲಿ ಕುಳಿತು ಆಟ ನೋಡುವ ಭಾಗ್ಯ ಇಲ್ಲ. ಅವುಗಳ ಬೆಲೆಯೂ ಕಮ್ಮಿಯಿಲ್ಲ. ಶ್ರೀಮಂತರಿಗಷ್ಟೆ ಟಿಕೆಟ್. ಅವರೂ ಲಾಠಿಚಾರ್ಜ್ ಮಾಡಿಸಿಕೊಂಡು ಟಿಕೆಟ್ ಕೊಳ್ಳಬೇಕು! ಎಂತಹ ಹೀನಾಯ ಸ್ಥಿತಿ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ ಕಳೆದ ವರ್ಷ ಭಾರತಕ್ಕೆ ವರದಾನದಂತೆ ಘಟಿಸಿದ ಘಟನೆ ಎಂದರೆ 20/20 ಕ್ರಿಕೆಟ್. ಎರಡು-ಮೂರು ಗಂಟೆಗಳಲ್ಲಿ ಮುಗಿಯುವ ಈ ಆಟ ಮುಂದಿನ ದಿನಗಳಲ್ಲಿ ಭಾರತದ ಒಳಗೂ ಪ್ರಭಾವ ಬೀರಲಿದೆ. ಭಾರತದಲ್ಲಿನ, ವಿಶೇಷವಾಗಿ ಅನೇಕ ಮಾಜಿ ಸ್ಟಾರ್ ಆಟಗಾರರನ್ನು ಹೊಂದಿರುವ ಕರ್ನಾಟಕದಲ್ಲಿನ ಶ್ರೀಮಂತರಿಗೆ, ಉದ್ಯಮಿಗಳಿಗೆ ಈಗ ಒಂದು ಅವಕಾಶವಿದೆ. ಅದು ಮೈಸೂರು, ಹುಬ್ಬಳಿ, ಮಂಗಳೂರು, ದಾವಣಗೆರೆಯಂತಹ ನಗರಗಳಲ್ಲಿ ಒಳ್ಳೆಯ ಕ್ರಿಕೆಟ್‌ಕ್ಲಬ್‌ಗಳನ್ನು ಮಾಡಿ, ನಗರಗಳ ಮಧ್ಯೆ ಪಂದ್ಯಗಳನ್ನು ಏರ್ಪಡಿಸುವುದು. ಇವತ್ತು ಕರ್ನಾಟಕದಲ್ಲಿ ಏಳೆಂಟು ಟಿವಿ ಚಾನಲ್‌ಗಳಿವೆ. ಮನರಂಜನೆ, ಸುದ್ದಿ, ಕ್ರೀಡೆಗಳ ವಿಚಾರಕ್ಕೆ ಈ ಚಾನಲ್‌ಗಳಿಗಿರುವುದು ಬಕಾಸುರ ಹಸಿವು. ಸರಿಯಾಗಿ ಯೋಜನೆ ಮಾಡಿ, ಒಂದೆರಡು ವರ್ಷಗಳ ಪ್ರಯತ್ನಶೀಲತೆ ಹಾಕಿದರೆ, ಸ್ಥಳೀಯ ಕುಂಬ್ಳೆ, ಜಾವಗಲ್‌ಗಳು, ಯಾವ ಧೋನಿ, ತೆಂಡೂಲ್ಕರ್‌ಗಿಂತಲೂ ಇಷ್ಟವಾಗುತ್ತಾರೆ. ಸ್ಥಳೀಯ ಕ್ಲಬ್‌ನಲ್ಲಿ ಆಟವಾಡುವ ಹುಡುಗನೂ ಒಂದು ಒಳ್ಳೆಯ ಆರ್ಥಿಕ ಭವಿಷ್ಯ ಕಟ್ಟಿಕೊಳ್ಳುತ್ತಾನೆ. ಅನೇಕ ಜನರಿಗೆ ಉದ್ಯೋಗವೂ, ಸಾವಿರಾರು ಜನರಿಗೆ ತಮ್ಮ ಊರಿನ ಬಗ್ಗೆ ಪ್ರೇಮವೂ, ಅಲ್ಲಿಯೇ ಉತ್ತಮ ಕ್ರೀಡಾರಂಜನೆಯೂ ಸಿಗುತ್ತದೆ. ಒಂದು ಜನಪ್ರಿಯ ಕ್ರೀಡೆಕ್ರೀಡೆ ಕೊಡಬೇಕಾದದ್ದು ಅದು. ಮುಂದುವರೆದ ದೇಶಗಳಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿರುವ ರೀತಿಯೂ ಇದೆ. ಪಾಶ್ಚಾತ್ಯ ದೇಶಗಳಲ್ಲಿನ “Who Wants to Be a Millionaire” ನಮ್ಮಲ್ಲಿ ಕೌನ್ ಬನೇಗ ಕರೋಡ್‌ಪತಿಯಾಗಿ ಬಂತು. ಅದೇ ತರಹ ಆಟಗಳೂ, ಕನಿಷ್ಠ ಟಿವಿಯವರ ಹಸಿವಿನಿಂದಾಗಿಯಾದರೂ ಬರುತ್ತವೆ. ಕಾಲ ಕೆಲವೊಮ್ಮೆ ಬಹುವೇಗವಾಗಿ ಚಲಿಸಿಬಿಡುತ್ತದೆ.

Reader Comments

Ravi,
Its a very nice presentation from you….I watch your videos manytimes…..

There is definitely a big potential to have twenty20 tournaments between different cities and clubs….as you might be already aware …..Vijay Mallya has got rights for Bangalore’s team for a whopping $79Mn …so I see its going in the right direction…….

Just a suggestion….your hands were looking too prominent on the video….avoid it….

#1 
Written By VInay on January 25th, 2008 @ 8:02 pm

ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/

ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

ನಗೆ ಸಾಮ್ರಾಟ್

#2 
Written By Anonymous on January 27th, 2008 @ 12:38 pm

Add a Comment

required, use real name
required, will not be published
optional, your blog address