Press Release : ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರವಿ ಕೃಷ್ಣಾರೆಡ್ಡಿಯವರನ್ನು ಬೆಂಬಲಿಸಿ ಯೋಗೇಂದ್ರ ಯಾದವ್‌ರಿಂದ ಪ್ರಚಾರ ಮತ್ತು “ಒಂದು ವೋಟು, ಒಂದು ನೋಟು” ಅಭಿಯಾನಕ್ಕೆ ಚಾಲನೆ

02-04-2018
ಬೆಂಗಳೂರು

ಮಾಧ್ಯಮ ಪ್ರಕಟಣೆ

ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರವಿ ಕೃಷ್ಣಾರೆಡ್ಡಿಯವರನ್ನು ಬೆಂಬಲಿಸಿ ಸ್ವರಾಜ್ ಇಂಡಿಯಾದ ಅಧ್ಯಕ್ಷರಾದ ಯೋಗೇಂದ್ರ ಯಾದವ್‌ರಿಂದ ಪ್ರಚಾರ ಮತ್ತು “ಒಂದು ವೋಟು, ಒಂದು ನೋಟು” ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ

ಜಯನಗರ ವಿಧಾನಸಭಾ ಕ್ಷೇತ್ರದಿಂದ ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣಾರೆಡ್ಡಿಯವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಬಗ್ಗೆ ಈಗಾಗಲೆ ಘೋಷಣೆ ಮಾಡಿದ್ದಾರೆ ಮತ್ತು ಕಳೆದ ಐದು ತಿಂಗಳಿನಿಂದ ಇಡೀ ಕ್ಷೇತ್ರದಲ್ಲಿ ಮನೆಮನೆ ಭೇಟಿ ಅಭಿಯಾನ ಮಾಡಿ, ಸಾವಿರಾರು ಜನ ಮತದಾರರನ್ನು ಭೇಟಿ ಮಾಡಿ, ಕ್ಷೇತ್ರದ ಹಲವು ಸಮಸ್ಯೆಗಳ ಪರಿಹಾರಕ್ಕೂ ಕಾರಣರಾಗಿದ್ದಾರೆ.

ಇಂದು ಚುನಾವಣೆಗಳನ್ನು ಕೇವಲ ಹಣ, ಜಾತಿ, ಮತ್ತು ತೋಳ್ಬಲಗಳು ನಿರ್ಧರಿಸುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಗಳಿಸಿರುವ ಕಪ್ಪುಹಣವೇ ಪ್ರಾಮುಖ್ಯತೆ ಪಡೆದಿದೆ ಮತ್ತು ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯ ಹತ್ತು-ನೂರು ಪಟ್ಟು ಹಣವನ್ನು ಅಭ್ಯರ್ಥಿಗಳು ಕಾನೂನುಬಾಹಿರವಾಗಿ ಖರ್ಚು ಮಾಡಿ ಚುನಾವಣೆಗಳನ್ನು ಕೊಳ್ಳುತ್ತಿದ್ದಾರೆ.

ನಮ್ಮ ರಾಜ್ಯದ ಪರಂಪರೆಯಲ್ಲಿ ಶಾಂತವೇರಿ ಗೋಪಾಲಗೌಡರಂತಹ ಆದರ್ಶವಾದಿ ಮತ್ತು ಜನಪರ ರಾಜಕಾರಣಿಗಳು ನಾಲ್ಕೈದು ದಶಕಗಳ ಹಿಂದೆಯೇ ಹಣವಂತರೇ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರುತ್ತೇಜಿಸಲು “ಒಂದು ವೋಟು, ಒಂದು ನೋಟು” ಕಲ್ಪನೆಯನ್ನು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಹುಟ್ಟುಹಾಕಿ, ಜನರ ದೇಣಿಗೆ ಹಣದಿಂದಲೇ ನ್ಯಾಯಯುತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುತ್ತಾರೆ. ಈ ಸಂದರ್ಭದಲ್ಲಿ ಅಂತಹುದೇ ಪರಿಕಲ್ಪನೆಯನ್ನು ನಾವು ಪ್ರಸ್ತುತ ಮಾಡಿಕೊಳ್ಳದಿದ್ದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ನೈಜ ಉದ್ದೇಶಗಳನ್ನು ಕಳೆದುಕೊಂಡು ತನ್ನ ಅರ್ಥವನ್ನೇ ಕಳೆದುಕೊಳ್ಳಲಿದೆ.

ಈ ಹಿನ್ನೆಲೆಯಲ್ಲಿ, ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರವಿ ಕೃಷ್ಣಾರೆಡ್ಡಿಯವರು ಶಾಂತವೇರಿ ಗೋಪಾಲಗೌಡರ ಆದರ್ಶವನ್ನು ಪಾಲಿಸುವುದರ ಭಾಗವಾಗಿ ಮತ್ತು ಚುನಾವಣೆಯಲ್ಲಿ ಜನರ ಪಾಲುದಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಇದೇ ಬುಧವಾರ, 04-04-2018 ರಿಂದ “ಒಂದು ವೋಟು, ಒಂದು ನೋಟು” ಹೆಸರಿನಲ್ಲಿ ಜನರಿಂದ ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಳ್ಳಲಿದ್ದಾರೆ. ಈ ಅಭಿಯಾನಕ್ಕೆ ಅಂದು ಚಾಲನೆ ನೀಡಲು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷ ಶ್ರೀ ಯೋಗೇಂದ್ರ ಯಾದವ್ ಆಗಮಿಸಲಿದ್ದಾರೆ. ಸ್ವರಾಜ್ ಇಂಡಿಯಾದ ಮುಖಂಡರಾದ ಹಿರಿಯ ಸಾಹಿತಿ ಶ್ರೀ ದೇವನೂರ ಮಹಾದೇವರವರು, ರಾಜ್ಯದ ಪ್ರಸಿದ್ಧ ಸಾಮಾಜಿಕ ಹೋರಾಟಗಾರ ಶ್ರೀ ಎಸ್.ಆರ್. ಹಿರೇಮಠರು ಸೇರಿದಂತೆ ಹಲವು ಗಣ್ಯರು ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ “ಒಂದು ವೋಟು, ಒಂದು ನೋಟು” ಅಭಿಯಾನಕ್ಕೆ ಚಾಲನೆ
ದಿನಾಂಕ : 04-04-2018, ಬುಧವಾರ
ಸಮಯ : ಬೆಳಗ್ಗೆ 8:30
ಸ್ಥಳ : ಮೈಯ್ಯಾಸ್ ಹೋಟೆಲ್ ವೃತ್ತ, ಜಯನಗರ ನಾಲ್ಕನೇ ಬ್ಲಾಕ್, ಬೆಂಗಳೂರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9449559451 / 7975625575.

ಪ್ರಕಟಣೆ:
ರವಿ ಕೃಷ್ಣಾರೆಡ್ಡಿ

2018 ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಣೆ

ಬಂಧುಗಳೇ,

ಈಗಾಗಲೇ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿ, ನನ್ನ ಇತಿಮಿತಿಗಳಲ್ಲಿ ಚುನಾವಣಾ ರಾಜಕೀಯ ಹೋರಾಟವನ್ನು ಮಾಡಿದ್ದ ನಾನು, ಈ ಬಾರಿ ಸ್ಪರ್ಧಿಸಿದರೆ ಗೆಲ್ಲಲೇಬೇಕು ಮತ್ತು ಆ ಮೂಲಕ ಒಂದು ಮಾದರಿ ನಿರ್ಮಿಸಿ, ರಾಜ್ಯದ ಸಾವಿರಾರು ಜನರಿಗೆ ಸ್ವಚ್ಚ ಮತ್ತು ಮೌಲ್ಯಾಧಾರಿತ ಚುನಾವಣಾ ರಾಜಕಾರಣದ ಬಗ್ಗೆ ಸ್ಫೂರ್ತಿ ಮೂಡಿಸಬೇಕು ಎನ್ನುವ ತೀರ್ಮಾನವನ್ನು ಮೊದಲೇ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ, ಹಣ-ಹೆಂಡ ಹಂಚದೆ, ಯಾವುದೇ ಚುನಾವಣಾ ಅಕ್ರಮ ಎಸಗದೆ, ಸುಳ್ಳು ಆಶ್ವಾಸನೆಗಳನ್ನು ನೀಡದೆ, ಆಮಿಷಗಳನ್ನು ಒಡ್ಡದೆ, ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ಪ್ರಚಾರ ಮಾಡಿ ಗೆಲ್ಲಲು ಸಾಧ್ಯವೇ ಎಂದು ಕಳೆದ ನಾಲ್ಕೂವರೆ ತಿಂಗಳಿನಿಂದ (11-11-2017 ರಿಂದ) ಕ್ಷೇತ್ರಾದ್ಯಂತ ಮನೆಮನೆ, ಬೀದಿಬೀದಿ ಸುತ್ತಿ ಜನಾಭಿಪ್ರಾಯ ಸಂಗ್ರಹಿಸುತ್ತ ಬಂದಿದ್ದೇವೆ. ಆ ಸಂದರ್ಭದಲ್ಲಿ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಪರಿಹಾರವೂ ಸಿಗುವಂತೆ ಮಾಡಿದ್ದೇವೆ.

ಈಗ ನನ್ನ ಮುಂದಿರುವ ಪ್ರಶ್ನೆ, ಇಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲ್ಲುವ ಅವಕಾಶ ಸಷ್ಟವಾಗಿ ಇದೆಯೇ? ಎನ್ನುವುದು.

ಕೆಲವು ಸಹಾಯ/ಬೆಂಬಲ ಸಿಕ್ಕರೆ ಖಂಡಿತ ಸಾಧ್ಯ ಎನ್ನುವ ವಿಶ್ವಾಸ ಈಗ ಬಂದಿದೆ.

ಎಂತಹ ಸಹಾಯಗಳು?
– ಕ್ಷೇತ್ರದವರಷ್ಟೇ ಅಲ್ಲ, ರಾಜ್ಯದ ವಿವಿಧ ಕಡೆಗಳಿಂದ ಕನಿಷ್ಟ ನೂರು ಜನರಾದರೂ ಸಮಾನಮನಸ್ಕರು ಬಂದು ಇಲ್ಲಿ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು.
– ಚುನಾವಣಾ ಆಯೋಗ ನಿಗದಿಪಡಿಸಿರುವ ಚುನಾವಣಾ ವೆಚ್ಚದ ಮಿತಿ ರೂ.28 ಲಕ್ಷ. ಅಷ್ಟನ್ನೂ ನಾವು ಜನರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲು ಸಾಧ್ಯವಾಗಬೇಕು, ಮತ್ತು ಅಷ್ಟನ್ನೂ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಚಾರಕ್ಕೆ ಬಳಸಬೇಕು.

ಮೇಲಿನ ಎರಡೂ ಸಾಧ್ಯವಾಗುತ್ತದೆ, ಹಾಗೂ ಕಳೆದ ನಾಲ್ಕೈದು ತಿಂಗಳಿನಿಂದ ನಾವು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳಿಂದ ಜಯನಗರದ ಮತದಾರರಿಗೂ ನಮ್ಮ ಬಗ್ಗೆ ಒಳ್ಳೆಯ ವಿಶ್ವಾಸ ಮೂಡಿದೆ ಎಂದು ನಮಗೆ ಈಗ ಪ್ರತಿದಿನವೂ ಅರಿವಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ನಾನು ಈ ಬಾರಿ ನಿಮ್ಮೆಲ್ಲರ ಬೆಂಬಲ-ಸಹಾಯ-ಸಹಕಾರದಿಂದ ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಅಧಿಕೃತವಾಗಿ ಘೋಷಿಸುತ್ತಿದ್ದೇನೆ.

ಒಂದೆರಡು ದಿನಗಳಲ್ಲಿ ನಮ್ಮ ಅಭಿಯಾನ ಚುನಾವಣಾ ಪ್ರಚಾರವಾಗಿ ಬದಲಾಗಲಿದೆ ಮತ್ತು ಇನ್ನೂ ಹಲವು ರೂಪಗಳನ್ನು ಪಡೆಯಬೇಕಿದೆ.

ಹಾಗೆಯೇ ಮೂರ್ನಾಲ್ಕು ದಿನಗಳಲ್ಲಿ ಚುನಾವಣಾ ಸಂಬಂಧಿ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಹಂಚಿಕೊಳ್ಳಲಾಗುತ್ತದೆ.

ನಿಮ್ಮೆಲ್ಲರ ತನು-ಮನ-ಧನದ ಸಹಾಯದ ನಿರೀಕ್ಷೆಯಲ್ಲಿ…

ಬನ್ನಿ, ಸ್ವಚ್ಚ, ಸುಂದರ. ಸದೃಢ, ಸಮೃದ್ಧ. ಲಂಚಮುಕ್ತ, ಮಾದರಿ ಜಯನಗರ ನಿರ್ಮಿಸೋಣ. ನಾವೆಲ್ಲಾ ಸೇರಿ ಆ ಮೂಲಕ ಇತಿಹಾಸ ನಿರ್ಮಿಸೋಣ. ಜನಪರ, ಮೌಲ್ಯಾಧಾರಿತ ರಾಜಕಾರಣ ಕಟ್ಟೋಣ, ಪ್ರಜಾಪ್ರಭುತ್ವ ಬಲಪಡಿಸೋಣ.

ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ

31-03-2018.

Powered by WordPress