ಮಂಗಳೂರಿನ ಸಜ್ಜನರೊಡನೆ…

This post was written by admin on April 15, 2007
Posted Under: Uncategorized

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಏಪ್ರಿಲ್ 27, 2007 ರ ಸಂಚಿಕೆಯಲ್ಲಿನ ಲೇಖನ)

ಕನ್ನಡದ ಕೆಲಸ ಮಾಡುತ್ತಿರುವ ದಕ್ಷಿಣ ಕನ್ನಡ ಮೂಲದ ಆ ಯುವ ಲಾಯರ್ ಮೈಸೂರಿನಲ್ಲಿ “ಸೌತ್ ಕೆನೆರ ಎಂದ ಮೇಲೆ ಮತೀಯ ಬಲಪಂಥೀಯತೆ ರಕ್ತದಲ್ಲೇ ಬಂದುಬಿಡುತ್ತೆ. ನಾನೂ ಬಲಪಂಥೀಯ,” ಎಂದಿದ್ದ ಮಾತುಗಳೆ ಮೈಸೂರು ಬಿಟ್ಟು ಮಂಗಳೂರಿನತ್ತ ಹೋಗುತ್ತಿದ್ದಾಗ ನನಗೆ ನೆನಪಾಗುತ್ತಿದ್ದದ್ದು.

ಮಂಗಳೂರಿನಲ್ಲಿ ಯುವ ಪತ್ರಕರ್ತ ಹರೀಶ್ ಆದೂರ್ ನಮಗಾಗಿ ಕೆಲವು ಮಿತ್ರರ ಗುಂಪನ್ನು ಸೇರಿಸಿ ಕಾಯುತ್ತಿದ್ದರು. ಮಂಗಳೂರಿನ ಪ್ರಸಿದ್ಧ ಸಾಹಿತ್ಯಿಕ ಗುಂಪಾದ “ದಾಸಜನ” ರ ಗುಂಪದು. ಆತ್ಮೀಯತೆಯ, ಮುಕ್ತ ವಾತಾವರಣದಲ್ಲಿ ನಡೆದ ಆ ಸಂವಾದಕ್ಕೆ ನಮ್ಮ ಅಂಕಣಕಾರರಾದ ವಿವೇಕ್ ಪೈ ಅವರೂ ಕೂಡಿಕೊಂಡರು. ಅಷ್ಟೊತ್ತಿಗೆ ನನಗೆ ಮಂಗಳೂರಿನ ಬಗೆಗಿರುವ ಅನೇಕ ಪೂರ್ವಾಗ್ರಹಗಳು ಕಳಚುತ್ತಾ ಹೋಗುತ್ತಿದ್ದವು.

ಹರೀಶ್ ಆದೂರ್ ಈಗ ತಾನೆ ಪ್ರೇಮದಲ್ಲಿ ಬಿದ್ದಂತೆ ಕಾಣಿಸುವ ಯುವ ಬರಹಗಾರ. ಯಾವ ಊರಿನ ಬಸ್‌ಸ್ಟ್ಯಾಂಡಿನಲ್ಲಿ ಇಳಿದರೂ ತನಗೆ ಕಾಣಿಸುವ ಹೊಸ ಪತ್ರಿಕೆ ಕೊಳ್ಳುವ ಹವ್ಯಾಸಿ. ಬಹುಶಃ ಕರ್ನಾಟಕದ ಎಲ್ಲಾ ಪತ್ರಿಕೆಗಳೂ ಇವರ ಮನೆಯಲ್ಲಿರಬೇಕು. ಹಾಗೆಯೆ ಕಂಡಕಂಡ ಪೆನ್ನುಗಳನ್ನೆಲ್ಲಾ ಕೂಡಿ ಹಾಕುವ “ಸಾವಿರ ಪೆನ್ನುಗಳ ಸರದಾರ”. ಯಾವುದೇ ಇಸಮ್ಮುಗಳ ಹಂಗಿಲ್ಲದ ಈ ನಗುಮೊಗದ ಯುವಕ ನನಗೆ ಮಂಗಳೂರಿನ ಜನರ ಸಜ್ಜನಿಕೆ, ಚುರುಕುತನ ಮತ್ತು ಕ್ರಿಯಾಶೀಲತೆಯಂತೆ ಕಂಡರು. ಮೂಡಬಿದ್ರೆಯ ಪಕ್ಕದ ಹಸಿರು ತುಂಬಿದ ಬೆಟ್ಟಗುಡ್ಡಗಳ ನಡುವಿನ ಅವರ ತೋಟದ ಮನೆಯಲ್ಲಿ ಅವರ ತಂದೆತಾಯಿಗಳ ಸಂಜೆಹೊತ್ತಿನ ಆತಿಥ್ಯ, ಆತ್ಮೀಯತೆ ನಗರ ಪ್ರದೇಶಗಳಲ್ಲಿ ಕಾಣಸಿಗಲಾರದಂತದ್ದು. ಮಂಗಳೂರು ಎಂದಾಕ್ಷಣ ಅಪ್ಪಟ ಮೂಲಭೂತವಾದಿಗಳ, ಲೆಕ್ಕಾಚಾರದ ಜನರ ಪ್ರದೇಶ ಎಂದು ಮಾಧ್ಯಮಗಳಲ್ಲಿ ಬಿಂಬಿತವಾಗಿರುವುದೆಲ್ಲ ಸುಳ್ಳು ಎನ್ನುವುದು ನಮಗೆ ಅಷ್ಟೊತ್ತಿಗೆ ಚೆನ್ನಾಗಿ ಗೊತ್ತಾಗಿತ್ತು.

ಅವತ್ತು ರಾತ್ರಿ ನಮ್ಮ ಮತ್ತೊಬ್ಬ ಅಂಕಣಕಾರರಾದ ಅರವಿಂದ ಚೊಕ್ಕಾಡಿಯವರ ಮನೆಯಲ್ಲಿ ಊಟವಾಯಿತು. ಅವರ ಶ್ರೀಮತಿ ಪತ್ರಿಕೆಯ ಬಳಗಕ್ಕೆ ಪ್ರೀತಿಯಿಂದ ಬಿಸಿಬಿಸಿ ನೀರುದೋಸೆ ಬಡಿಸಿ, ಅದರ ಜೊತೆಗೆ ಟೀಯನ್ನೂ ಕೊಟ್ಟರು! ಇತ್ತ ಕಡೆ ಊಟದ ಜೊತೆಜೊತೆಗೆ ಟೀಯನ್ನೂ ಕೊಡುತ್ತಾರೆ ಎಂದು ನಮ್ಮಲ್ಲಿ ಯಾರಿಗೂ ಗೊತ್ತಿರಲಿಲ್ಲ. ಊಟದ ಜೊತೆಗೆ ಅರವಿಂದರ “ಅರವಿಂದಾ, ಪ್ರಮೀಳಾ” ಎಂದು ಮುದ್ದುಮುದ್ದಾಗಿ, ಗಟ್ಟಿಯಾಗಿ ಉಲಿಯುವ ಅವರ ಪುಟ್ಟ ಮಗಳು ಅಧ್ಯಯನಳ ಸಾಹಚರ್ಯ ನಮ್ಮನ್ನೆಲ್ಲ ಖುಷಿಯಲ್ಲಿ ಮುಳುಗಿಸಿತ್ತ್ತು. ದಕ್ಷಿಣ ಕನ್ನಡದ ಮನೆಯ ಆತ್ಮೀಯತೆಯಿಂದ ಬಿಡಿಸಿಕೊಂಡು, ಪೈ ಅವರನ್ನು ಬೀಳ್ಕೊಂಡು, ಕಾರ್ಕಳದ ಲಾಡ್ಜಿಗೆ ನಾನು ಮತ್ತು ಮಲ್ಲನಗೌಡರು ಬರುವಷ್ಟರಲ್ಲಿ ಅರವಿಂದರು ಜಿನೇಶ್ ಎನ್ನುವ ಒಬ್ಬ ಹುಡುಗನೊಂದಿಗೆ ಇದ್ದರು.

ಅವತ್ತು ರಾತ್ರಿ ನಮ್ಮಗಳ ಮಾತುಕತೆ ನಡುರಾತ್ರಿಯವರೆಗೂ ನಡೆಯಿತು. ಅಲ್ಲಿದ್ದ ನಮಗ್ಯಾರಿಗೂ ಕುಡಿತದ ಅಭ್ಯಾಸವಾಗಲಿ, ರಾತ್ರಿಯನ್ನು ಹಗಲು ಮಾಡಿಕೊಳ್ಳುವ ಕೆಟ್ಟ ಹವ್ಯಾಸಗಳಾಗಲಿ ಇರಲಿಲ್ಲ. ಅಲ್ಲಿದ್ದದ್ದು ಸಮಾನಮನಸ್ಕರ ಮಾತುಕತೆ ಮಾತ್ರ. ಅದೂ ವಿಷಯಾಧಾರಿತವಾಗಿತ್ತೆ ಹೊರತು ಏನೇನೋ ಗಾಸಿಪ್ ವಿಚಾರವಾಗಲಿ, ಇನ್ನೊಬ್ಬರ ವೈಯಕ್ತಿಕ ಜೀವನವನ್ನು ಕುರಿತಾದ್ದಾಗಲಿ ಆಗಿರಲಿಲ್ಲ. ಇಷ್ಟೆಲ್ಲ ಇತಿಮಿತಿಗಳ ನಡುವೆ, ನಮ್ಮ ಚೊಚ್ಚಲ ಭೇಟಿಯಲ್ಲಿಯೇ ಸಮಯದ ಪರಿವೆಯಿಲ್ಲದೆ ಮಾತನಾಡುತ್ತ ಕುಳಿತದ್ದು ನಮ್ಮೆಲ್ಲರಿಗೂ ಆಶ್ಚರ್ಯ ಹುಟ್ಟಿಸಿತು. ಜಿನೇಶ್ ಮೌನವಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ.

ಮಾರನೆಯ ದಿನ ಬೆಳಿಗ್ಗೆ ಜಿನೇಶ್ ಆರೂವರೆಗೆಲ್ಲ ಬಂದು, ಕಾರ್ಕಳದಿಂದ ಹತ್ತು ಕಿ.ಮೀ. ದೂರದ ಅವರೂರಾದ ನಲ್ಲೂರಿನ ಕೂಷ್ಮಾಂಡಿನೀ ಜೈನ ಬಸದಿಗೆ ಕರೆದುಕೊಂಡು ಹೋದ. ನಾನು ಬಹುಶಃ ಇದೇ ಮೊದಲ ಸಲ ಪೂಜೆ ನಡೆಯುವ ಬಸದಿಗೆ ಹೋಗಿದ್ದು. ಇಲ್ಲಿನ ಬಸದಿಯಲ್ಲಿ ಜೈನರ ಪ್ರಕಾರ ಸ್ವರ್ಗದ ಕಲ್ಪನೆ ಹೇಗಿರುತ್ತದೊ ಅಂತಹುದರ ಪ್ರತಿ ನಿರ್ಮಿಸಿದ್ದಾರೆ. ಅವರ ತಂದೆ ನಮಗೆ ಅದನ್ನೆಲ್ಲ ತೋರಿಸಿ, ಬಸದಿಯ ಸ್ಥಳಮಹಾತ್ಮೆಯನ್ನೂ ವಿವರಿಸಿದರು. ದೇವಸ್ಥಾನದಿಂದ ಹೊರಗೆ ಬಂದು ನೋಡಿದರೆ ಎದುರಿಗೆ ಚಾಚಿ ನಿಂತ ಬೆಟ್ಟಗಳಲ್ಲಿ ಹಸಿರು ಮೈಚಾಚಿ ನಿಂತಿದೆ. ಸ್ವರ್ಗ ಇಲ್ಲಿಯೇ ಇದೆ ಎಂದು ಒಂದು ಕ್ಷಣ ಅನ್ನಿಸಿದ್ದು ಸುಳ್ಳಲ್ಲ.

ಜಿನೇಶ್‌ರದು ಕೂಡು ಕುಟುಂಬ. ಅವರ ದೊಡ್ಡಪ್ಪ, ಚಿಕ್ಕಪ್ಪನವರೆಲ್ಲ ಒಂದೇ ಸೂರಿನಡಿ ಇರುವ ದೊಡ್ಡ ಕುಟುಂಬ. ಅವರ ಮನೆಯಲ್ಲಿ ಜಿನೇಶರ ತಾಯಿ ಮತ್ತು ಅಕ್ಕತಂಗಿಯರಿಂದ ನಮಗೆ ಮತ್ತೊಮ್ಮೆ ದಕ್ಷಿಣ ಕನ್ನಡದ ವಾತ್ಸಲ್ಯ ಪೂರ್ಣ ಆತಿಥ್ಯ. ಆ ಹುಡುಗ ನನಗೆ ಪರಿಚಯವಾಗಿ ಇನ್ನೂ ಹನ್ನೆರಡು ಗಂಟೆಗಳೂ ಆಗಿರಲಿಲ್ಲ. ಆ ತಾಯಂದಿರಿಗೆ ಬಹುಶಃ ನಾನು ಯಾರು, ಯಾವ ಊರಿನವನು ಎಂದು ಗೊತ್ತಿದ್ದ ಹಾಗೆಯೂ ಇರಲಿಲ್ಲ. ಅವರಿಗೆ ಅದು ಮುಖ್ಯವೂ ಅಲ್ಲವೇನೊ! ಮನೆಗೆ ಮಗ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದಿದ್ದಾನೆ ಎನ್ನುವುದಷ್ಟೆ ಅವರಿಗೆ ಮುಖ್ಯವಾಗಿರಬೇಕು. ದಕ್ಷಿಣ ಕನ್ನಡದ ಆ ಮೂರು ಮನೆಗಳಲ್ಲಿ ವಿನಾಕಾರಣ ಕಂಡ ವಾತ್ಸಲ್ಯ, ಪ್ರೀತಿ ಮತ್ತು ನಿರಾಡಂಬರವನ್ನು ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಹುಡುಕಿಕೊಂಡು ಹೋದರೂ ಸಿಗುವುದು ಅಪರೂಪವೇನೊ. ಎದೆ ಇದ್ದಕ್ಕಿದ್ದಂತೆ ಭಾವುಕವಾಗುತ್ತಿತ್ತು.

ಜಿನೇಶ್ ನನ್ನನ್ನು ಮತ್ತು ಮಲ್ಲನಗೌಡರನ್ನು ಮೂರಂತಸ್ತಿನ ಮನೆಯ ಮೇಲಕ್ಕೆ ಕರೆದುಕೊಂಡು ಹೋಗಿ ಸುತ್ತಲಿನ ಅಗಾಧ ಹಸಿರು ರಾಶಿಯನ್ನು ತೋರಿಸಿದ. ಆಗಲೇ ಆತನ ಮನೆಯ ಗ್ರಂಥ ಭಂಡಾರ ನೋಡಿದ್ದು. ಆ ಹುಡುಗನ ಬಗ್ಗೆ ನನಗೆ ಅಲ್ಲಿಯವರೆಗೂ ಏನೂ ಗೊತ್ತಿರಲಿಲ್ಲ. ಅವರ ಮನೆ, ವಹಿವಾಟು ನೋಡಿ, ಶ್ರೀಮಂತರ ಮನೆಯ ಹುಡುಗ, ಕನ್ನಡ ಓದಿಕೊಂಡಿದ್ದಾನೆ, ಶ್ರೀಮಂತರಿಗಿರುವಂತೆ ದೊಡ್ಡ ಹವ್ಯಾಸಗಳಿಲ್ಲ ಎನ್ನಿಸಿತ್ತು. ಆ ಸಮಯದಲ್ಲಿಯೇ ಜಿನೇಶ್ ಐದು ಕನ್ನಡ ಪುಸ್ತಕಗಳನ್ನು ಕೈಗಿಟ್ಟು, ನಾವೇ ಕೆಲವು ಸ್ನೇಹಿತರು ಸೇರಿ ಮೌಲ್ಯ ಪ್ರಕಾಶನ ಎನ್ನುವ ಸಂಸ್ಥೆಯನ್ನು ಆರಂಭಿಸಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ನಾವು ಪ್ರಕಟಿಸಿದ ಪುಸ್ತಕಗಳು ಇವು, ಎಂದ. ಇಡೀ ಪ್ರವಾಸದಲ್ಲಿ ಅತ್ಯಂತ ದೊಡ್ಡ ಶಾಕ್ ಅನುಭವಿಸಿದ ಗಳಿಗೆ ಅದು! ಈ ಪುಸ್ತಕಗಳ ಬಿಡುಗಡೆಗೆ ಮೈಸೂರಿನಿಂದ ರಾಮದಾಸ್ ಬಂದಿದ್ದರಂತೆ ಎಂದರು ಮಲ್ಲನಗೌಡರು. ಏಟಿನ ಮೇಲೆ ಏಟು! ದಕ್ಷಿಣ ಕನ್ನಡದ ನಲ್ಲೂರಿನ ಈ ಯುವಕರೆಲ್ಲಿ, ಮೈಸೂರಿನ ಸೆಕ್ಯುಲರ್ ರಾಮದಾಸರೆಲ್ಲಿ? ಈಗಿನ ಕಾಲದ ಸಿರಿವಂತ ಮಕ್ಕಳೆಲ್ಲಿ, ಅವರ ಕನ್ನಡ ಪುಸ್ತಕ ಪ್ರಕಟಿಸುವ ಅಭಿರುಚಿಯೆಲ್ಲಿ?

ಬೆಂಗಳೂರಿನ ಶ್ರೀಮಂತ ಯುವಕರು ರಾತ್ರಿಯೆಲ್ಲ ಕುಡಿದು, ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ಅನ್ನ ಕೇಳಿಕೊಂಡು ಹೋಟೆಲ್‌ಗೆ ಹೋಗಿ ಧಾಂಧಲೆ ಮಾಡಿ ದೇಶದಲ್ಲೆಲ್ಲ ಹೆಸರುವಾಸಿ ಆಗುತ್ತಿರಬೇಕಾದರೆ, ಇನ್ನೂ ಇಪ್ಪತ್ತೆರಡು ಇಪ್ಪತ್ತುಮೂರು ದಾಟಿರದ, ಈ ವಯಸ್ಸಿಗೇ “ಮೌಲ್ಯ” ಭರಿತ ಪುಸ್ತಕಗಳನ್ನು ಮುದ್ರಿಸುತ್ತ, ಸುತ್ತಮುತ್ತ ವಿಜೃಂಭಿಸುತ್ತಿರುವ ಆಕರ್ಷಣೀಯವಾದ ಕೋಮುವಾದವನ್ನು, ಅವೈಚಾರಿಕತೆಯನ್ನು ನಿರಾಕರಿಸುತ್ತ, ಮೈಮನಗಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಶ್ರಮಿಸುತ್ತಿದ್ದಾರೆ ಇಲ್ಲಿನ ಯುವಕರು! ಆ ಪುಟ್ಟ ತಮ್ಮನನ್ನು ಸಂತೋಷದಿಂದ ತಬ್ಬಿಕೊಳ್ಳದೆ ಇದ್ದಿದ್ದರೆ ನನ್ನ ಮನಸ್ಸಿನಲ್ಲೆದ್ದ ಆನಂದದ ಭಾವನೆಗಳಿಗೆ ಅಪಚಾರ ಮಾಡಿದಂತಾಗಿಬಿಡುತ್ತಿತ್ತು! ಘಟ್ಟದ ಕೆಳಗಿನ ಯಾವೊಂದು ಕ್ಷಣವೂ ಭವಿಷ್ಯದ ಬಗ್ಗೆ ನಿರಾಶೆ ಮೂಡಿಸಲಿಲ್ಲ.

ಮೌಲ್ಯ ಪ್ರಕಾಶನ, ನಲ್ಲೂರು, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ – ಇವರ ಪ್ರಕಟಣೆಗಳು:
೧. ಅನ್ವಯ (ವೈಚಾರಿಕ) – ಅರವಿಂದ ಚೊಕ್ಕಾಡಿ
೨. ಮಾಗಿಯ ಕೋಗಿಲೆ (ಕವನ ಸಂಕಲನ) – ಸುಬ್ರಾಯ ಚೊಕ್ಕಾಡಿ
೩. ಹನಿ ಹನಿ ಸೂರ್ಯ (ಹನಿ ಕವಿತೆಗಳು) – ಜಿ.ಎಸ್. ಉಬರಡ್ಕ
೪. ಋಣ ಸಂದಾಯ (ಕಥೆಗಳು) – ಎಂ. ಜೆ. ಪದ್ಮಿನಿ
೫. ನೆನಪು ತೆರೆವ ಕವಿಮನ – (ಪಾಬ್ಲೊ ನೆರೂಡ ಅವರ ಆತ್ಮಕತೆಯ ಸಂಗ್ರಹ) – ನಯನಾ ಕಶ್ಯಪ್

Reader Comments

Well. I admire your intention of doing something good by trying to contest elections.

As I believe – MLA’s job is like that of a software program manager. You need to maintain good relations with everyone and get things done.
I have no issues with you being a communist who identifies with U R A’s school of thought.
The point is it is useless when it comes to actually doing things on ground.

Irrespective of the “political color” (RSS hating communist like you, middle pathed congress, Rhetorical RSS guys, others), what matters is the ability to get things done.

Firstly, if you become MLA on what basis you will support the CM candidate? Based on party? Based on education of the candidate? based on their past record?

If you have to choose between Kharge and Yadiyurappa, who would you choose and why?

#1 
Written By IT on April 30th, 2008 @ 12:02 pm

Continuing…
My view is that the ‘doer’ needs to stay least controversial so that he/people around do not digress.
Going gaga over ideologoy yields nothing. Whether Kunti had pre-marital baby or discussions about ‘communalists’ etc won’t do any good other than dividing people.
None of your blogs seem to talk about why our cities are the way they are. It is not just about corrupt politicians/beuraucratcs alone. There are too many outdated laws. And people issues.
You would need to work with effective, but egoists, short tempered ones and so on.
All your blogs indicate your good intentions, but do they reflect various people handling styles required ? You sound like hot blooded, but the risk for your voters is that you might end up quarreling with everyone.
If Yadyurappa becomes CM and you become Jayanagar MLA, how well will you work with him? Can you cajole, patiently follow up for funds, other tasks in front of him?

#2 
Written By IT on May 2nd, 2008 @ 9:36 am

Add a Comment

required, use real name
required, will not be published
optional, your blog address